Tuesday, November 12, 2013

ಹೆಂಡತಿ ಹಾಕಿದ ಫೋಟೋ... ಗಂಡ ವೊತ್ತಿದ ಲೈಕೂ....

ನ್ಯೂಲೀ ಮೆರೀಡ್ ಕಪಲ್. ಮಾವ ಕೊಡಿಸಿದ ಹೊಂಡಾ ಬೈಕು. ಮಡದಿಯ ಸೆರಗಿನ ಕೆಂಪು ದಾರ. ಸಣ್ಣ ಗಾಳಿಗೂ ಹಾರುವ ಉದ್ದ ಮುಂಗುರುಳು. ಒಂದು ಕೈಯಲ್ಲಿ ಅಮರಾನ್ ಬ್ಯಾಟರಿ, ಇನ್ನೊಂದು ಕೈಯಲ್ಲಿ ಕಾರ್ಬನ್ ಮೊಬೈಲು. ನೆತ್ತಿಯ ಮೇಲರ್ಧ ತಾಸು ಬೀಳಲಿ ಬಿಸಿಲು. ಕನಸಿನ ಸಾಮ್ರಾಜ್ಯ ಕಟ್ಟುವುದಿಲ್ಲ. ಅಲ್ಲಿ ಮಳೆಗಾಲ ಬೇಡ. ಹೂದೋಟದಲಿ ಅರೆಕ್ಷಣ ಬಾಯ್ದೆರೆದು ನಿಂತು ಸಂಜಾಯಿತು. ರಂಗು ರಂಗಿನ ಕನಸು ಕಂಡವ, ಬೆಳಿಗ್ಗೆ ಎದ್ದ, ಹಲ್ಲುಜ್ಜಿ ಸ್ನಾನ ಮಾಡಿ ಆಫೀಸಿಗೆ ಹೋದ. ಒಂದು ಗುಟುಕು ಎಣ್ಣೆ ಹೊಡೆದು ಭರಪೂರ ನಿದ್ದೆ ಮಾಡಿದವನೂ ಬೆಳಿಗ್ಗೆ ಎದ್ದ, ಹಲ್ಲುಜ್ಜಿ ಸ್ನಾನ ಮಾಡಿ ಕೆಲಸಕ್ಕೆ ಹೋದ. ಅದೇ ಸೂರ್ಯ, ಅದೇ ಬಿಸಿಲು. ಬಿಸಿಲಿಗೆ ಅಡ್ಡ ಬರುವ ಅದೇ ಮೋಡ.

ಓಡೋಡಿಕೊಂಡು ಹಿಡಿದ ಬಸ್ಸಿನಲಿ ನಿಂತೇ ಬಂದವನು ಮನೆಯಲ್ಲಿ ಸೋಫಾದ ಮೇಲೆ ಕುಳಿತು ಬಿಟ್ಟ ದೊಡ್ಡ ನಿಟ್ಟುಸಿರು ಸಿಗರೇಟಿನ ಹೊಗೆಯಾಗಿ ಗಗನವ ಸೇರಿತು. ನಿನ್ನೆ ರಾತ್ರಿ ಕನಸು ಕಂಡು ನಿರಾಳವಾದ ಕಣ್ಣು ಬೆಳಿಗ್ಗೆ ಕಾಣುವುದು ಕರಾಳ ಜಗತ್ತಿನ ತೀರದ ದಾಹವ ನೀಗಿಸಲು ಹವಣಿಸುವ ಬೀದಿ ನಾಟಕವ. ನಿನ್ನೆ ಕೊಟ್ಟ ಕೈಯಿಂದು ಕತ್ತು ಹಿಸುಕುವುದು. ರಕ್ತವ ಸಹಿಸಲು ಆಗದ ಕೈಯೊಂದು ಬೇರೆಯವರ ಕರಿಯ ಎದೆಯ ಬಿಳಿಯ ಶರಟಿಗೆ ಒರೆಸಿ ಸಮಾಧಾನದಿಂದ ನಗೆಯಾಡುವುದು.
ಈ ನಡುವೆ ನೀನೆಲ್ಲಿ ಕಂಡೆ ನನಗೆ? ಎಲ್ಲರೂ ಹೇಳುವಂತೇ ಹೇಳುವುದಾದರೆ, ತುಂಬ ದೂರ ನಿಂತು ನನ್ನ ನೋಡಿಯೂ ನೋಡದಂತೇ, ನಕ್ಕರೂ ನಗದಂತೇ  ಹೋದವಳು ನೀನೇ ಅಲ್ಲವೇ? ಕನಸು ಹೆಕ್ಕಿಕೊಟ್ಟ ನೂರಾರು ಆಸೆಗಳ ಅಡ್ಡಪಲ್ಲಕ್ಕಿ ಉತ್ಸವ. ಮುಸ್ಸಂಜೆಯಲಿ ನೆನಪು ಬಿತ್ತಿದ ಬೀಜ ಮೊಳಕೆಯೊಡೆಯಲು ಮಧ್ಯಾನ್ನದಲಿ ನೀರೆತ್ತಬೇಕು. ಮಳೆಗಾಲದಲೂ ಒರತೆಯಿಲ್ಲ. ನಾನೀಗ ಸೈಕಲ್ಲು ಹೊಡೆದು ಸುಸ್ತಾಗಿ ಕುಳಿತಿದ್ದೇನೆ. ನೀನೆಷ್ಟು ದೂರ ಕರೆದರೂ ಬಂದೇ ಬಿಡುವೆನೆಂಬ ಧೈರ್ಯ ನನಗಿಲ್ಲ ಈಗ. ಹಲ್ಲಿದ್ದರೂ, ಹಲ್ಲು ಸರಿಯಿದ್ದರೂ, ಕಡಲೆಯಿದ್ದರೂ ಜಗಿಯಲಾರೆ ಈಗ; ಹಲ್ಲು ಮುರಿದೀತೆಂಬ ಭಯವಷ್ಟೇ! ವಿಪರ್ಯಾಸ!!

ಸುಕೋಮಲೆ, ಕೈಕೈಯ ಹಿಡಿದು ಹೊರಟಳು ಸಮಯ ಕಳೆಯಲಿಕ್ಕೆ. ಒಂದು ಕೈಯಲ್ಲಿ ಕೆಮೆರಾ ಇನ್ನೊಂದು ಕೈಯಲ್ಲಿ ಗಂಡ. ನಮನಮೂನೆಯ ಭಂಗಿ, ನಮನಮೂನೆಯ ಚಿತ್ರ, ನಮನಮೂನೆಯ ಫೋಟೋ. ಗಾಳಿಯಲಿ ಎಲೆ ಹಾರಿದಂತೇ, ಧೂಳಿನಲಿ ಮರೆಯಾದ ಮರವ ತೋರಿಸಿ ಸೂರ್ಯಾಸ್ತದ ಸಮಯವೆಂಬಂತೇ, ಮುಳುಗಲು ಹೊರಟ ಸೂರ್ಯ ಇವಳಂದವ ಕಂಡು  ಕ್ಷಣಕಾಲ ಕಣ್ತುಂಬಿಕೊಂಡೇಬಿಡುವ ಎಂದು ಪುಟ್ಟ ಮರದ ಮುದಿ ಹಣ್ಣೆಲೆಯ ಮೇಲೆ ಕುಳಿತಂತೇ, ಪೊದೆಯ ಕತ್ತರಿಸಿ ಮಾಡಿದ ಮಂಗನಾಕೃತಿಯ ಬುಡದಲ್ಲಿ ಭರತನಾಟ್ಯದ ಭಂಗಿಯಂತೇ, ಗಂಡನ ಹುಳುಕು ಹಲ್ಲಿನ ನಡುವಿಂದ ಕಾರಂಜಿ ಚಿಮ್ಮಿದಂತೇ.... ನಮನಮೂನೆ... ಆಹಾ...

ಲಾಲ್‍ಬಾಗಿನ ಬೀದಿಯಲ್ಲಿ ಅಂಗಿ ಹರಿದುಕೊಂಡು ಕೂತೊಂದು ಮಗು ತಾಯಿಗಾಗಿ ಹಂಬಲಿಸುತ್ತಿಲ್ಲ; ದುಡ್ಡಿಗಾಗಿ ಕೈಚಾಚುತ್ತಿದೆ. ಕೆಮೆರಾ ನೋಡಿ ಮುಗುಳುನಗೆಯ ಬೀರುತ್ತಿದೆ; 'ನಂಗೊಂದು ಲೈಕು ಕೊಡಿ... ಪ್ಲೀಜ್..'. ಇಲ್ಲಿನ ಹೂವುಗಳೆಲ್ಲ ಇಬ್ಬನಿಯಲಿ ಮಿಂದು ಶುಭ್ರಗೊಂಡು ದೇವರ ಪೂಜೆಗೆ ಅಣಿಯಾದಂತಿಲ್ಲ. ಆಗತಾನೇ ತಾಪಿ ನದಿಯಲ್ಲಿ ಈಜಾಡಿ ಮೈಕೊಡವಿ ನಿಂತ ಸೂರತ್‍ ಬೀದಿಯ ಯೂನಿವರ್ಸಿಟಿ ರೋಡಿನ ಅಭಿಸಾರಿಕೆಯಂತಿದೆ. 'ನಾನು ಮಾಡಿದ ಒಳ್ಳೆಯ ಕೆಲಸ'ದಲ್ಲಿ ನಾನೂ ಬರೆದಿದ್ದೆ ಎಲ್ಲರೂ ಬರೆದಂತೇ 'ಬೆಳಗಾಮುಂಚೆ ಎದ್ದು ದೇವರಿಗೆ ಹೂ ಕೊಯ್ದೆನು' ಎಂದು. ಈಗಿನ ಮಕ್ಕಳು ಬರೆಯುವುದೇ ಇಲ್ಲ. ಬರೆಯಲು ಹೇಳುವವರೂ ಇಲ್ಲ. ಬರೆಯುವಂತೆಯೂ ಇಲ್ಲ. ದೇವರ ಪೂಜೆ 'ಮೂಢನಂಬಿಕೆ'ಯೆಂದು ಫರ್ಮಾನು ಬಂದಿದೆ!! ಗಿಡದಿಂದ ಹೂವ ಕೊಯ್ದು ಗಿಡಕ್ಕೆ ನೋವುಂಟುಮಾಡಿದರೆ ಅಪರಾಧ!! ಆಗಿನ ಕಾಲದ ಒಳ್ಳೆಯ ಕೆಲಸ ಈಗಿನ ಕಾಲದ ಅಪರಾಧ. ಆಗಿನ ಒಳ್ಳೆಯವನು ಈಗಿನ ಅಪರಾಧಿ!! ತಂಬೂರಿಯೊಂದಿಗೆ ತಾಳವಿಲ್ಲ. ಜಿಟಿ ಜಿಟಿ ಮಳೆ ಮನವ ತೋಯಿಸುವುದಿಲ್ಲ; ಅಂಗಿಯ ಕಪ್ಪು ಕಲೆಯಾಗುವುದು. ಬಿಟ್ಟೆನೆಂದರೂ ಬಿಡುವುದಿಲ್ಲ ಇದು. 'ಅಗೋ ನಿಂಗೇ ಹೇಳಿದ್ದು, ಕಾಲ ಬುಡ ನೋಡಿಕೊಂದು ನಡೆ ಅಂತಾ' ಎಂದು ಚಿಕ್ಕಂದಿನಲ್ಲಿ ಅಜ್ಜ ಬಯ್ಯುತ್ತಿದ್ದ ನೆನಪಾಯಿತು. ಕಾಲ ಬುಡವ ನೋಡಿಕೊಂಡು ನಡೆದರೆ ಗಾಡಿ ಬಂದು ಎದೆಗೆ ಗುದ್ದಿ ಸ್ವರ್ಗಕ್ಕೆ ದಾರಿ ತೋರುವುದು ಈಗ. 

ನಡೀ ಮನೆಗೆ. ಬೇಳೆ ಸಾರು, ನಾಕು ಕಾಳನ್ನ. ರಾತ್ರಿಯ ಕೂಳಿಗೆ ದಂಡ. ಟೀವಿಯುಂಟು, ಕಂಪ್ಯೂಟರುಂಟು, ಇಂಟರ್‍ನೆಟ್ಟುಂಟು, ಹಾಕು ಹೊಡೆದ ಫೋಟೋ, ಲೈಕು ವೊತ್ತುವೆ ನಾನು...... 
ವಿಶೇಷವೇನಿದೆ?? 
ರಾತ್ರಿಗೂ ಹಗಲಿಗೂ ಒಂದೇ ದಾರಿ!

Friday, June 7, 2013

ಎರಡು ಹಳಿಯ ರೈಲು

ಗುಡುಗು-ಮಿಂಚು. 
ಮಳೆಯಾಗಬಾರದೇ ಕ್ಷಣ ಹೊತ್ತು ಎಂದವರಿಗೆಲ್ಲ ಉತ್ತರ ಕೊಟ್ಟಿದ್ದು ಮಳೆಯೊಂದಿಗೆ ಗಾಳಿ! ಈ ಬಿಸಿಲಲ್ಲಿ ತಿರುಗಾಟವೂ ಕಷ್ಟ ಎಂದವರಿಗೆಲ್ಲ ಕೂರು ಮಗನೇ ಸೂರಿನ ಕೆಳಗೆ ಎಂದು ಎಂದು ಬಿಡದೇ ಸುರಿಯುತ್ತಿದೆ. ಗಾಳಿಯಲ್ಲಿ ಮಳೆಯ ಹನಿ ನಲಿಯಿತ್ತಿದೆ. ರಸ್ತೆಯ ಮೇಲೆ ಜೋಡಿ ನರ್ತನ!
ನನಗೀಗ ಬರೆಯಲಿಕ್ಕೆ ಮನಸಿಲ್ಲ. ನನ್ನ ತಲೆಯಲ್ಲೀಗ ಪಿಳ್ಳೆಯೊಂದು ಓಡಾಡುತ್ತಿದೆ. ಅದರ ಹೊಟ್ಟೆಯೊಳಗೊಂದು ಸಂಜೆಯ ಹಾಡಿದೆಯಂತೆ. ನನಗೀಗ ಕಣ್ಣು ತೆರೆದಲ್ಲೆಲ್ಲ ಅಮಲಿನ ಮುಲಾಮು ಹಚ್ಚಿದಂತಾಗಿ ನಿದಿರೆಯ ಜಾಪು ಮೂಡಿದೆ. ತನ್ನ ಸೌಂದರ್ಯದ ಮೇಲೆ ತನಗೇ ನಂಬಿಕೆಯಿಲ್ಲದೇ ಕೆನ್ನೆ-ತುಟಿಗಳಿಗೆ ಗುಲಾಬಿ ಬಣ್ಣ ಬಳಿದುಕೊಂಡು ಮುಸ್ಸಂಜೆಯ ಪ್ರದರ್ಶನಕ್ಕೆ ಕಾದು ಕುಳಿತಿರುವ ನಾಟ್ಯಶಾಲೆಯ ಮಾಸ್ತರಾಣಿಯಂತೇ…. ಮೋಡದ ಹಿಂದಿರುವ ಸೂರ್ಯ!

ಇಲ್ಲಿ ಕತೆಯ ಹೇಳುವುದು ಹಳಬರಲ್ಲ. ಹಳೆಯ ಕತೆ ಕೇಳಲಿಕ್ಕೆ ಸಮಯವಿಲ್ಲ. ಹೇಳಿದ್ದೇ ಕತೆಯ ಹೇಳಬೇಡಿ ದಯವಿಟ್ಟು. ನಗು ಬರುವುದು, ದುಃಖವಾಗುವುದು, ಬೇಸರವೂ ಆಗುವುದು; ಕಳೆದು ಹೋಯಿತಲ್ಲ ದಿನಗಳು… ಎಂದು. ತಪ್ಪು ಮಾಡಿದ್ದೇನಾ? ಎಂದು ತಲೆ ತಗ್ಗಿಸಿ ನಿಲ್ಲುವುದು ಮನ. ಹಲದೂರ ತೆರಳಿದ ಮೇಲೆ ಕೆಲ ನೆನಪುಗಳು. ಅಲ್ಲಿ ಚಂದಿರನ ನೆರಳಿತ್ತೇ? ಉರಿ ಬಿಸಿಲಲ್ಲಿ ಸಮುದ್ರ ದಂಡೆಯ ಮೇಲೆ ಜತೆನಡೆದವಳ ಪಾದದ ಗುರುತಿತ್ತೇ?! ಬೇಡ ಹಳೆಯ ನೆನಪುಗಳ ಗೋಜಲು. ಮುಸ್ಸಂಜೆಯಲಿ ಮಂದ ಬೆಳಕಿಗೆ ಮುತ್ತಿಕೊಂಡ ನೊರಜಲುಗಳನ್ನು ಓಡಿಸಲು ಹಾಕಿದ ಅಡಕೆ ಸಿಪ್ಪೆಯ ಗಾಢ ಹೊಗೆಗೆ ಕಣ್ಣು ತುಂಬಿ ಮೂಗಿನಲ್ಲಿ ನೀರಿಳಿದು ಹೊಗೆಯನ್ನೇ ಹೆದರಿಸೋಡಿಸುವಂಥ ಕೆಮ್ಮೊಂದು ಬರಬೇಕು.

ಬಹುದೂರ ನಡೆಯಲಿಲ್ಲ ಕೈಹಿಡಿದು ಮಾತಿಲ್ಲದೇ. ಕಿವಿ ಕಿತ್ತುಹೋಗುವಂಥ ಮೌನವಿರಲಿಲ್ಲ ದಾರಿಗುಂಟ. ಸಂಜೆಯಾಗಿರಲಿಲ್ಲ. ತೆಂಗಿನ ಮರದ ಬುಡದಲ್ಲಿ ಕಾಯಿ ಬಿದ್ದ ಸದ್ದೂ ಕೇಳಲಿಲ್ಲ. ವಾರದ ಹಿಂದಷ್ಟೇ ರಥಬೀದಿಯಲ್ಲೆಲ್ಲಾ ಎಳೆದಾಡಿ ವಾಪಸು ತಂದು ನಿಲ್ಲಿಸಿಟ್ಟ ತೇರಿನ ಪುಟ್ಟಪುಟ್ಟ ಬಾವುಟವನ್ನೆಲ್ಲಾ ಪಟಪಟನೆ ಹಿಡಿದಲ್ಲಾಡಿಸುವ ಬಿಸಿಲಿನಲ್ಲಿ ಸುಟ್ಟ ಗಾಳಿ. ವರುಷಗಳ ಲೆಕ್ಕವಿಲ್ಲದೇ ಗಾಲಿಗಳಿಗೆ ಹಚ್ಚಿಕೊಂಡು ಬಂದಿರುವ ಗ್ರೀಸಿನ ಬ್ರಹ್ಮಾಂಡ ಪರಿಮಳ. ಗೋಕರ್ಣದ ಬೀದಿಯಲ್ಲಿ……….. ಉರಿಉರಿ ಬಿಸಿಲಲ್ಲಿ….. ಮತ್ತೆ ಮತ್ತೆ ಕೂಡಿ ಮತ್ತೆ ದೂರವಾಗುವ ನೆರಳು…. ಹಗಲಿನಲ್ಲಿ ಎಲ್ಲವೂ ಒಂದೇ ತರಹ, ಇರುಳಿನಲ್ಲಿ ಹಲವು ರೂಪ. ಕಡಲ ತಡಿಯಲಿ ಒಂದು ಗಾನ. ಬೆಟ್ಟದ ತಪ್ಪಲಲ್ಲಿ ಒಂದು ಮೌನ. ಮರದ ನೆರಳಲ್ಲಿ ಗಾಳಿಯ ಕೂಗು. ಗಾಳಿಯ ಮರೆಯಲ್ಲಿ ಮರೆಯದ ನಗು!

ನಿಂತ ನೀರಿನಲ್ಲಿ ಮುಖ ತೊಳೆದು ದಿಗಂತದತ್ತ ನೋಡಿದಳು ಚಲುವೆ. ಪ್ರಶಾಂತ ನಗುವಿನಲಿ ಚಂದ್ರೋದಯವಾಯಿತು. ಮರೆತಿದ್ದ ನೆನಪುಗಳು ತಂಗಾಳಿಯಂತೆ ಮನಸಲಿ ತೇಲಿ ಮಾಯವಾಯಿತು, ಕಾಡಿನಲಿ ತಪ್ಪಿದ ದಾರಿಯೇ ಸರಿಯೆಂದು ನಡೆದೇ ನಡೆಯುವ ಬೆವರು ತುಂಬಿದ ಕಳೇಬರದ ಕಳೆ ಹೊಂದಿದ ಚಕಿತ ಮುಖ! ಆ ದಾರಿಯಲಿ ಅವಳಿಲ್ಲ. ಈ ದಾರಿಯಲಿ ಒಲವಿಲ್ಲ. ಬರಿದೇ ನಡೆಯುವ ಸಾಹಸಕೆ ಕೊನೆಯಿಲ್ಲ. ಕನಸು ಮುಗಿಯುವುದಿಲ್ಲ. ಒಂಟಿಕಾಲ ಶಿಕ್ಷೆ ಮರೆಯುವುದಿಲ್ಲ. ಮೂರು ಗೆರೆಯ ನಡುವೆ ಬರೆದ ಅಕ್ಷರ ಕೊನೆಗೂ ದುಂಡಗಾಗಲಿಲ್ಲ.

ಕಪ್ಪು ಹಲಗೆಯ ಮೇಲೆ ಬಿಳಿಯ ಚಿತ್ತಾರ. ಪ್ರೇಮಿಗಳಿಗೂ ಇಲ್ಲಿ ಪ್ರೀತಿಯ ಕನ್ನಡಕವುಂಟು. ಕಣ್ತೆರೆದು ಗಾಳಿಗೆ ಮುಖವೊಡ್ಡಿ ನಿಂತರೆ ಮನಸ್ಸು ತೇಲುವುದಿಲ್ಲ. ಧೂಳು ಕೂರುವುದು ಕಣ್ಣಲ್ಲಿ. ಪಾರ್ಕಿನ ಬೆಂಚಿನ ಮೇಲೆ ದಪ್ಪ ಕನ್ನಡಕದ ಹಿಂದೆ ಕಣ್ಣುಗುಡ್ಡೆಯ ತೇಲಾಡಿಸುತ್ತ ಕುಳಿತ ನಿಜಾಮನಿಗೆ ತಾನೆಲ್ಲಿದ್ದೇನೆ ಎಂದು ಅರಿವಾಗುವುದರೊಳಗೆ ಜಿಟಿ ಜಿಟಿ ಮಳೆ. ಕತ್ತಲಾಗುವುದರೊಳಗಲ್ಲ, ಕನಸು ಶುರುವಾಗುವುದರೊಳಗೆ ಮನೆಯ ಸೇರಿಕೋ. ಹಳ್ಳದ ನರು ರಸ್ತೆಗೆ ಬರುವುದಂತೆ ಚಂದ್ರ ಮೂಡುವ ಸಮಯದಲ್ಲಿ. ಅದ್ಯಾವ ಚಂದ್ರೋದಯವಾಯಿತೋ! ಪಾಪ, ಹುಡುಗಿಗೆ ನಿದ್ರೆ ಕಣ್ತುಂಬಿ ಬಂದು ಕುಳಿತಲ್ಲಿಯೇ ಬಿದ್ದು ಮೂಗಿಡೆದು ರಕ್ತ ಬಂದಿತು, ಹಲ್ಲು ಮುರಿಯಿತು, ಹಲ್ಮುಕ್ಕಿಗೆ ಸಿಮೆಂಟು ಜೋಡಿಸಿದರಂತೆ ಮದುವೆಯ ಸಮಯದಲ್ಲಿ!

ಪರೀಕ್ಷೆ ಬರೆದವರು ಪಾಸಾಗಲೇಬೇಕೆಂದಿದೆಯೇ?!

ಎಮ್ಮೆ ಕಟ್ಟಿಕೊಂಡವರಿಗೆ ಹಾಲು ಕರೆಯಲು ಬರಲೇಬೆಕೆಂದಿದೆಯೇ?!

ಮುಂಗುರುಳ ಉರುಳಲ್ಲಿ ಕೊರಳು ಬಿಗಿದು ಹೋಗಿ ಅರಿಷಡ್ವರ್ಗ ಮೀರಿ ಸನ್ಯಾಸಿಯಾಗುತ್ತೇನೆಂದು ಹೊರಟು ತೋರು ಬೆರಳು ಮಡಚಿ ಕುಳಿತವ ಮದುವೆಯಾದ. ಎಂಟು ವರ್ಷದ ಹಿಂದೆ ಮದುವೆಯಾಗಿ ಸುಖಸಂಸಾರಿ ಎನಿಸಿಕೊಂಡವ ಮರದ ಪಾದುಕೆ ಮೆಟ್ಟಿ ಭವಸಾಗರವ ದಾಟಲು ದೋಣಿ ಹತ್ತಿದ! ಕನಸುಗಳೆಲ್ಲ ಮುಗಿದ ಮೇಲೆ… ಎಂದು ಸಮುದ್ರ ದಂಡೆಯಲ್ಲಿ ಕುಳಿತು ಹಾಡು ಹಾಡಿದವ ಚಪ್ಪಾಳೆ ತಟ್ಟಲು ಕೈಗಳಿಗಿಲ್ಲಿ ಪುರುಸೊತ್ತಿಲ್ಲ ಎಂಬುದು ಅರಿವಾಗಿ ಸುಮ್ಮನೇ ನೀರು ಕುಡಿದು ಮನೆಗೆ ಬಂದ. ಎಲ್ಲೋ ಹಾರಾಡುತ್ತಿದ್ದ ಬಿಳಿಹಕ್ಕಿಯ ಹಿಡಿದು ತಂದು ಕೈಯಲ್ಲಿ ಮುದ್ದೆ ಕಟ್ಟಿ ಹಿಡಿದು ಫ್ರೀಬರ್ಡ್ ಎಂದು ಮತ್ತೆ ಹಾರಾಡಲು ಬಿಟ್ಟು ಚಪ್ಪಾಳೆ ಗಿಟ್ಟಿಸಿಕೊಂಡ ಇನ್ನೊಬ್ಬ! ಯಾವಾಗಾದರೊಂದು ಹಿತವಾಗಿ ಬೀಸುವ ಗಾಳಿಗೆ ಹಾರಾಡುವ ಕೂದಲನ್ನೆ ನೋಡುತ್ತ ಕುಳಿತು ರಾತ್ರಿಯಾಗಿ ನಿದ್ರೆಯ ಮರೆತ.
ಬಿರು ಬಿಸಿಲಲ್ಲಿ ಸೆಖೆಯ ಉರಿ ತಡೆಯಲಾಗದೇ ಕಡಲ ತಡಿಯಲ್ಲಿ ನಾಯೊಂದು ಮೂತಿಗೆ ಮೆತ್ತಿಕೊಂಡ ಹೊಂಯ್ಗೆ; ಉಪ್ಪಿಟ್ಟು!!

ತುಂಬಿಸಿಟ್ಟಿದ್ದ ಪಾಯಸವ ಗುಟುಕಿನಲ್ಲಿ ಮುಗಿಸಬಿಡುವೆ ಎಂದು ಹುಮ್ಮಸ್ಸಿನಲ್ಲಿ ತಟ್ಟೆಯನ್ನು ಬಾಯ್ಗಿಟ್ಟವನಿಗೆ ಸಿಕ್ಕಿದ್ದು ಮಾರುದ್ದದ ಕರಿಯ ಕೂದಲು; ಅಮೃತಬಳ್ಳಿಯ ಕಷಾಯ!

ಹಳೆಯ ನೆನಪುಗಳು. ಮುಸ್ಸಂಜೆಯ ಪ್ರಸಂಗಗಳು. ಬೆಟ್ಟದ ಮೇಲೆ ಕೆಂಪು ಸೂರ್ಯನೊಂದಿಗೆ ನಾವು. ನಮ್ಮ ಕೈಯ ನಡುವಲ್ಲಿ ಸುಳಿಯದ ಗಾಳಿ. ಹೋ… ಎಂದು ಕೂಗಿದರೆ ಓ… ಎಂದು ಕೂಗುವ ಬಂಡೆ. ಕೊರಳಿಗೊಂದು ಪುಟ್ಟ ಹಾರ. ಹಣೆಯ ಮೇಲೆ ಮಳೆಯ ಹನಿ. ಅಚಾನಕ್ಕಾಗಿ ಗುಡುಗು-ಮಿಂಚು, ತಂಪು ತಂಪು. ತಿಳಿ ಗುಲಾಬಿ ಬಣ್ಣದ ಆಕಾಶ.

ದಯವಿಟ್ಟು ಕೊರೆಯಬೇಡಿ. ಗಂಟಲಿನಲ್ಲಿ ಲೋಕವನ್ನೆಲ್ಲ ಉಳಿಸಲು ಕುಡಿದ ವಿಷವಿಲ್ಲ. ಮೊನ್ನೆ ಈಶ್ರು ಗೌಡ ಕೊಯ್ದಿಟ್ಟ ಹದಕ್ಕೆ ಬೆಳೆದಿದ್ದ ಹಲಸಿನ ಹಣ್ಣುಂಟು. ನಗಿಸಬೇಡಿ; ಮಳೆಗಾಲದಲ್ಲಿ ಹಣ್ಣು ಚೆಪ್ಪೆಯಾಗಿ ನೀರ ರುಚಿ ಬರುವುದು, ದೊಡ್ಡ ಆಕಳಿಕೆಯೊಂದಿಗೆ ಮಧ್ಯಾನ್ನದ ಸಣ್ಣ ನಿದಿರೆಯನ್ನು ಮುಗಿಸಿ ಜಿಡ್ಡು ಸಂಜೆಯ ಸ್ವಾಗತಿಸಬೇಕು.

ಮತ್ತೆ ಊಟ, ನಿದಿರೆ, ಬೆಳಗು!!

Sunday, March 3, 2013

ಸೂರ್ಯ ಡಿಮ್ಮಾದ..


ಬಹಳ ದಿನಗಳ ನಂತರ ಒಂದು ಕೆಂಪು ಸಂಜೆ. ಬೀದಿ ದೀಪಗಳ ಗರ್ಜನೆಯಿಲ್ಲ. ವಾಹನಗಳ ಹಾಹಾಕಾರವಿಲ್ಲ. ಕಣ್ಣು ಬಿಟ್ಟು ಬರಿಯ ಆಗಸದ ಕಡೆಗೆ ನೋಡಿದರೆ ಬೆಳ್ಳಬೆಳ್ಳಗಿನ ಮಳೆತರದ ಮೋಡ. ಕೊನೆ ಹೊತ್ತುಕೊಂಡು ತೂಗುವ ಅಡಕೆಮರ. ಪುಟ್ಟಪುಟ್ಟ ಹುಲ್ಲುಗಳಿಂದ ಮೈಯನ್ನೆಲ್ಲ ಹಸುರು ಮಾಡಿಕೊಂಡ ಕೆಂಪುಮಣ್ಣಿನ ಪಾಗಾರ. ಆಗೊಂದು ಈಗೊಂದು ಟುರ್ರುಗುಡುತ್ತ ಬಂದು ರಸ್ತೆಯಲಿ ನಿಂತಿರುವ ಸಣ್ಣ ಹೊಂಡದ ಮಳೆಯ ನೀರನ್ನು ಹಾರಿಸಿ ಹೋಗುವ ಸ್ಕೂಟರು. ಮಳೆ ನಿಂತ ಸಂಜೆಯಲಿ ರಸ್ತೆಯ ಬದಿಗೆ ನಿಂತ ಕಲ್ಲು ರಾಶಿಯ ಮೇಲೆ ಕೂತರೆ ಸಣ್ಣ ನೆನಪು, ಕಳೆದು ಹೋದ ಪ್ರೀತಿಯದ್ದು! ಮಧ್ಯ ರಾತ್ರಿಯಲಿ ನಿಡಿದಾದ ನಿದ್ರೆ. ದಿನದ ಮಧ್ಯದಲಿ ನಿಗಿನಿಗಿ ಕೆಲಸ. 
ನನಗೀಗ ಕೊಂಚ ವಿರಾಮ... ಸಂಜೆಯಾಗಿದೆ, ಮಳೆ ಬರಬೇಕು ರಾತ್ರಿಯೆಲ್ಲ!! 
ಕೈಯಲ್ಲಿ ಹಿಡಿದ ದಂಟು ಮುರಿದು ಕತ್ತು ಬಗ್ಗಿಸಿದ ಕೆಂಪು ಗುಲಾಬಿಯ ಕಂಡು ನಗುತ್ತಿದ್ದ ದಿನಗಳಲ್ಲಿ ಸಾಯದೇ ಉಳಿದ ರೆಕ್ಕೆಯುದುರಿದ ಹಾತೆಯ ಗತಿ! 
ನಿನ್ನೊಂದಿಗೆ ಕಳೆದ ಸವಿಕ್ಷಣಗಳ ಬರೆದಿಟ್ಟುಕೊಳ್ಳಲಿಕ್ಕೆ ಒಂದು ಹೊಸ ಪಟ್ಟಿಯ ಕೊಂಡುಕೊಂಡೆ. ಪಟ್ಟಿ ಹೊಸತಾದರೇನು! ಅದರ ಮೇಲೆ ಬರೆದ ಇಸವಿಯಿನ್ನೂ 2003. 'ಹತ್ತು ವರುಷದ ಹಿಂದೆ ಮುತ್ತೂರ ತೇರು!' ದೂರದಲಿ ನಿಂತು ನಗಬೇಡ ನೀನು. ನಾನು ಮಳ್ಳ, ನನಗೂ ಗೊತ್ತು. ಪ್ರೀತಿ ಪ್ರೇಮಗಳ ಗೊಡವೆಯೇ ಬೇಡವೆಂದು ಪಕ್ಕದ ಮನೆಯ ಕೆಂಪು ಸೀರೆಯ ಅಜ್ಜಿ ದಿನವೂ ಸಂಜೆ ಸುತ್ತುತ್ತಿದ್ದ  ಆಲದ ಮರದ ಕೆಳಗೆ ಕಲ್ಲಾಗಿ ಹೋದವಳು ನೀನು. ದಿನವೂ ಮಡಿಯುಟ್ಟು ಭಸ್ಮ ಹಚ್ಚಿಕೊಂಡು ಕೊಡ ನೀರನ್ನು ಕಲ್ಲ ಮೇಲೆ ಸುರಿಯುತ್ತಿರುವೆ ನಾನು! ನಿನ್ನ ನೋಡಿದಾಗಿನ ಮೋಹವೀಗ ಭಕ್ತಿಯಾಗಿ ಹೋಯಿತೇ! ವಿಸ್ಮಯ.

ಬಹಳ ದಿನಗಳ ನಂತರ ಒಂದು ನೆನಪೆದ್ದಿದೆ ಎದೆಯೊಳಗಿಂದ..... ಮದ್ದಿಲ್ಲದ ರೋಗವ ಹೊತ್ತುಕೊಂಡಿರುವ ದಿನರಾತ್ರಿಯ ಹಂಗಿಲ್ಲದ ಬೇವಾರ್ಸಿ ಕಾಲಕ್ಕೆ ರಾತ್ರಿಯಾಗಿದೆ. ನೀನು ಗೆದ್ದೆ ಎಂದವಳು ಪೂರ್ತಿ ಸೋಲಿಸಿ ಹೋದಳು. ಹೋದಲ್ಲಿ ಬಂದಲ್ಲಿ 'ನೀನು ಗೆದ್ದೆ' ಎಂದು ನಗುವ ದನಿ. ಆ ದನಿಯ ಕೇಳಿ ಕೇಳಿ ಮತ್ತೆ ಸೋಲುವ ನಾನು. ನಾನು ಸೋತೆನೇ? ಮರುಳಿ ನೀನು! ನಿನ್ನ ದನಿಯ ಕೇಳುವ ನನ್ನ ಕಿವಿ, ನಿನ್ನ ಕನಸು ಕಾಣುವ ರೆಪ್ಪೆ ಮುಚ್ಚಿಕೊಂಡ ಕಣ್ಣು,  ನಿನ್ನ ನೆನಪ ಹೊತ್ತ ನಾನು... ಎಲ್ಲ ನಿನ್ನ ಕಡೆಗೇ!! ಗೆದ್ದವಳು ನೀನು; ಗೆದ್ದವಳ ಬಯಸುತ್ತಿರುವ ನನ್ನಲ್ಲಿ ಸೋಲೆಂಬುದು ಹರಿದು ಹೋದ ನೀರು.
ರೈಲು ಹಳಿಗಳ ಮೇಲೆ ಒಂಟಿಯಾಗಿ ಕುಳಿತು ಧೇನಿಸಿದ ಸಂಜೆಯಲಿ ಬಿಳಿಬಿಳಿಯಾಗಿ ತಿಂಗಳ ಬೆಳಕಿನಲಿ ಹಾದು ಹೋದವಳು; ಹಣೆಯ ಮೇಲೆ ಹೊಳೆಯುವ ತಾರೆ. ಬಿದಿಗೆ ಚಂದಿರನ ಎಳೆಎಳೆಯಾಗಿ ಕೈಗೆ ಸುತ್ತಿಕೊಂಡಂತಿರುವ ಹೊಳೆವ ಬಳೆಗಳು, ಅದರ ಸದ್ದು ಅದಕ್ಕೂ ಕೇಳದು! ಧರಿಸಿದ ಬಟ್ಟೆಯ ಸೋಕಿದ ಗಾಳಿ ಬಳಿಸುಳಿದು ಅರೆಕ್ಷಣ ಕತ್ತಲಿನಲಿ ಮರೆತೇ ಹೋಗುವ ಬೆಳಿಕಿನಂತೇ ಈ ಜಗತ್ತು ಮರವೆಯಾಗುತ್ತಿತ್ತು....
ಮರವೆಯಾಯಿತೆಂದರೂ ಮರವೆಯಾಗದು ಸೈಕಲ್ಲು ಹೊಡೆದ ರೋಡು. ಮುಗಿಯಿತೆಂದುಕೊಂಡಂತೇ ಮತ್ತೆ ಮತ್ತೆ ಬಂದೇ ಬರುವ ಹುಣ್ಣಿಮೆಯ ಹಾಡು! ಸವಿ ಕಲ್ಪನೆಗಳು ಬೇಡ, ಸಾಕದರ ಮೋಹಲೀಲೆ!! 

ಅಮ್ಮ ಫೇರೆಂಡ್ ಲವ್ಲಿ ಹಚ್ಚದೇ ನನ್ನ ಹೊಟ್ಟೆ ತುಂಬುವುದಿಲ್ಲ. ನನ್ನ ಹೊಟ್ಟೆ ತುಂಬಿಸದಿದ್ದರೆ ಫೇರೆಂಡ್ ಲವ್ಲಿ ತರಲಿಕ್ಕೆ ಜನರಿಲ್ಲ. ಪುಟ್ಟ ಮಗುವೊಂದು  ಆಗಸವನ್ನು ನೋಡಿ ನಕ್ಕಿತು. ಪ್ರೀತಿ ಪ್ರೇಮಗಳ ಅನಿರೀಕ್ಷಿತ ಸುಳಿಯಲ್ಲಿ ಅನಾಗರಿಕವಾಗಿ ಸಿಲುಕಿ ನಲುಗಿಹೋದ ಜೀವಗಳ ಅನಪೇಕ್ಷಿತ ನೆನಪು. ತುಪ್ಪ ಕಾಯಿಸಿ ಜಿಡ್ಡುಗಟ್ಟಿ ಹೋದ ನಿನ್ನೆಯ ಪಾತ್ರೆಯನ್ನು ತೊಳೆಯಲು ನೀರಿಲ್ಲ; ಇಂದು ಬಂದವರಿಗೆ ಪಾಯಸ ಮಾಡಬೇಕಂತೆ.! 

ಕಾರಿನಲ್ಲಿ ಓಡಾಡುವವರ ಜುಮ್ಮನೆ ಜೀವನ, ಕಾಡಿನಲ್ಲಿ ಓಡಾಡುವವರ ಬರಿಗಾಲ ಯವ್ವನ. ನಗು ಬಂತು. ಸೂರತ್ತಿನ ಅತಿ ಎತ್ತರದ ಫ್ಲೈಓವರಿನ ಮೇಲೆ ಲೈಟು ಕಂಬವ ಹಿಡಿದು ನಿಂತವ ಏನನ್ನೋ ನೆನೆದು ನಕ್ಕೆ. ನೆನೆದದ್ದು ಏನು? ಕಂಡದ್ದು ಏನು!? ಸೂರ್ಯ ಮುಳುಗುವ ಸಮಯದಲ್ಲಿ ಸಬ್ ಜೈಲಿನ ಹಿಂದುಗಡೆ, ಅಥ್ವಾ ಲೈನ್ಸಿನ ಬದಿಯಲ್ಲಿ, ಯೂನಿವರ್ಸಿಟೀ ರೋಡಿನಲ್ಲಿ ಫೇರೆಂಡ್ ಲವ್ಲಿ ಮೆತ್ತಿಕೊಂಡು ಲಿಪ್ ಸ್ಟಿಕ್ಕು ಹಚ್ಚಿಕೊಂಡು ಸರತಿ ಸಾಲಲ್ಲಿ ಕಂಡುಬರುವ ಆ ಹೆಣ್ಣುಗಳಿಗೆ ಸಂಸಾರವಿಲ್ಲವೇ!! ದಾರಿಯುದ್ದಕೂ ಹರಿಯುವ ಆ ವಾಹನಗಳ ದಂಡು; ಎಷ್ಟೊಂದು ಜನರು! ಎಲ್ಲರೂ ಹೋಗುವುದಾದರೂ ಎಲ್ಲಿಗೆ? ಎಲ್ಲರಿಗೂ ಮನೆಯುಂಟೇ? ಎಲ್ಲರೂ ಅವರವರ ಮನೆಗೇ ಹೋಗುವರೇ? ಮಧ್ಯರಾತ್ರಿಯಲಿ ಒಮ್ಮಲೇ ರಸ್ತೆ ಖಾಲಿಯಾಗುವುದಾದರೂ ಹೇಗೆ?! 

ಅನಿಶ್ಚಿತ ಪ್ರಶ್ನೆಗೆ ಉತ್ತರ ಹುಡುಕಬಾರದಂತೆ...

ನೀವು ಕನಸಿನಲ್ಲಿ ಬಂದವರಂತೇ ಹಾಡಬೇಡಿ, ನನಗೆ ನೋವಾಗುತ್ತದೆ. ಹಳೆಯ ನೆನಪುಗಳು ಎದೆಯ ಮೆಟ್ಟಿ ನಿಂತು ನೀಲಾಂಜನವ ನಂದಿಸುತ್ತದೆ. ಕರಿ ರಾತ್ರಿಯಲೂ ನನಗೆ ನೆನಪಿನ ಕಾಟದ ಅರಿವುಂಟು. ಬೇಸರವಾಗುತ್ತದೆ ದೂರವಾದವರ ನೆನೆದು. ಬೇಸರವಾಗುತ್ತದೆ ದೂರ ಹೋದವರ ನೆನೆದು. ಹಾಡಬೇಡಿ ಎಂದರೆ ನಿಮಗೆ ಬೇಸರ. ಹಾಡು ಕೇಳಿದರೆ ನನಗೆ ಬೇಸರ. ಅವಳು ಕಿವಿಗಿಟ್ಟ ಪ್ರೀತಿಯ ನವಿಲುಗರಿ ಯಾವುದೋ ಪುಸ್ತಕದ ಹದಿನೆಂಟನೆಯ ಪುಟದಲ್ಲಿ ಬೆಚ್ಚಗೆ ಕುಳಿತಿದೆ ಇಂದೂ. ಹದಿನೆಂಟು, ಅವಳಿಗೊಂದು ಹೆಪಿ ಬರ್ತಡೇಯ ದಿನ. ದಿನವೂ ಒಂದೊಂದು ಹೆಪ್ಪಿ ಬರ್ತಡೇ ಎಂದು ಅವಳ ಮನೆಯ ಬಾಗಿಲು ತಟ್ಟಿ ಹೇಳಿ ಬರುವ ಎನಿಸುತ್ತಿತ್ತು; ದಿನ ಬೆಳಗಾದರೆ ಪೇಪರು ಹಾಕುವವನ ದಿನಚರಿಯಂತೇ! ಹುಚ್ಚು ಎಂದಾಳು... ಹುಚ್ಚು ಎಂದವಳ ಹಿಂದೆ ಹುಚ್ಚನಂತೇ ಅಲೆದು ಕೊನೆಗೆ ಉದರಿ ಬಿದ್ದ ಹಣ್ಣೆಲೆಯ ಮೇಲೆ ಲಾರಿಯ ಟಾಯರು ಹಾರಿಸಿದ ಬೇಸಗೆಯ ಧೂಳು. 
ಕಣ್ಣಿಲ್ಲದ ತಿರುಕನಿಗೆ ನಾಯಿ ತೋರಿಸಿತಂತೆ ದಾರಿಯ....
ರಾತ್ರಿಯ  ಎಲ್ಲ ಕೊಳೆಯನ್ನು ಸುಟ್ಟೇ ಬಿಡುವೆ ಎಂದು ದಿನಬೆಳಗಾದರೆ ಅದೇ ಮುಖವನ್ನು ಹೊತ್ತು ಬರುವ ಸೂರ್ಯ, ಕಂತುವಾಗ ಸೋತೇ.. ಎಂದು ಸುಮ್ಮನಾಗುವ. ಒಂಟಿ ಬಯಲಲ್ಲಿ ಚಂದ್ರನಿಗೆ ಇದ್ದೂ ಇಲ್ಲದ ಹೋರಾಟ!!!

Tuesday, January 1, 2013

ಮೈ ನೇಮ್ ಈಸ್ ರೇಣುಕಾ..



ಹಳೆಯ ವರುಷದ ಒಂದು ಹೊಸ ಡೈರಿಯ ತೆಗೆದೆ. ಖಾಲಿ ಖಾಲಿ ಪುಟದ ಮೇಲೆ ನಕ್ಕು ಹೋದವರು, ನಿಂತು ಹೋದವರು, ಬಂದು ಹೋದವರು, ಇದ್ದು ಹೋದವರೆಲ್ಲರ ಗುರುತು ಸಿಕ್ಕಿತು. ಉಳಿದುಹೋದವರು ಮಾತ್ರ ಜೊತೆಯಲಿರುವವರು ಎಂದು ನಕ್ಕೆ. ಸುಮ್ಮನೇ ಒಂದು ಚಳಿಯ ರಾತ್ರಿಯಲಿ ದೊಡ್ಡ ಉಸಿರೊಂದು ಖಾಲಿ ರಸ್ತೆಯ ಮೇಲೆ ಸಾಗುತ್ತಿರುವ ರಿಕ್ಷಾದಂತೇ ಸದ್ದು ಮಾಡಿತು.
ಹಳತು ಹೋಯಿತು ಹೊಸದು ಬಂತು ಎನ್ನುವ ಪ್ರಶ್ನೆಯೇ ಇಲ್ಲ. ಅದೊಂದು ಬೆರಗಿನ ಸಂಗತಿಯೂ ಅಲ್ಲ. ಹಳತು ಜಾಗ ಬಿಟ್ಟರೆ ಮಾತ್ರವೇ ಹೊಸತು ಬರುವುದು ಎನ್ನುವುದೂ ಸುಳ್ಳೇ ವಾದ. ಹಳೆಯ ಜನರಿನ್ನೂ ಇದ್ದರೂ ಹೊಸ ಜೀವಗಳ ಜನನವಾಗುವುದಿಲ್ಲವೇ?! ಇದೊಂದೇ ಉದಾಹರಣೆ ಸಾಕು. ಎಲ್ಲ ಹಳೆಯದರ ನಡುವೆ ಹೊಸತೊಂದು ಬಂದು ಕೂರುವುದು. ಹಳತರ ಪ್ರಭಾವ ಅದರ ಮೇಲಾಗಿ ಹೊಸತೂ ಬೇಗನೆ ಹಳತಾಗುವುದು. ಇದೇ ಜೀವನ ಎಂದು ಬುದ್ಧಿಜೀವಿಗಳ ವಾದ. ಸಣ್ಣವ ನಾನು; ಹ್ಞೂಂ ಎಂದೆ!

ಡಿಸೆಂಬರಿನ ಕೊನೆಯ ದಿನ. ಅರೆನಗ್ನ ನೃತ್ಯದಲ್ಲಿ ತಲ್ಲೀನವಾಗಿ ಚಳಿ ಇನಿಯಳಿಲ್ಲದ ಇನಿಯನ ಹಂಗಿಸುತಿಹುದು! ಹಳೆಪಳೆಯ ಹಾಡುಗಳು ರಾತ್ರಿಯಲಿ ಬಂದೀತೇ ಉಪಯೋಗಕ್ಕೆ? ಅದೇನಿದ್ದರೂ ಮುಸ್ಸಂಜೆಗೆ! ಮನಸ್ಸು ಮಳೆಗಾಲದ ಹಾದಿಯ ಹಿಡಿದು ಕೊಂಚ ಹಿಂದೋಡಿತು. ಅರಾವಳಿ ಬೆಟ್ಟವ ಸೀಳಿಕೊಂಡು ಮುನ್ನುಗ್ಗುತ್ತಿದ್ದ ರೈಲು. ಕಿಟಕಿಯ ಸಂದಿಯಿಂದ ಅರ್ಧಮೂತಿಯ ಹೊರಹಾಕಿ ಆಗಾಗ ಕಾಣಿಸಿಕೊಳ್ಳುತ್ತಿದ್ದ  ಸೂರ್ಯನ ಸುಮ್ಮನೇ ನೋಡುತ್ತಿದ್ದ ನಾನು. ತೊಡೆಯ ಮೇಲೊಂದು ಬೆರಳು ತಟ್ಟಿತು. ಕಾಗದವ ಒಗೆದು ಕೈ ಮುಂದೆ ಮಾಡಿ ನಿಂತಳು ಹೆಂಗಸು..... ರೇಣುಕಾ......
My name is Renuka, I have two children. My brother lost two hands in an accident. I have one sister. I am living with my mother. Kindly help us by `5, 10, 20, 50, 100. God may give all happiness to you.
Thank You.

ಭಾರತೀಯ ಕುಟುಂಬ! ಸಾಮಾನ್ಯವಾಗಿ ಭಿಕ್ಷುಕರ ಮುಖನೋಡಿ ದುಡ್ಡು ಕೊಡುವವ ನಾನು ಕಿಸೆಯಲ್ಲಿ ಕೈ ಹಾಕಿದಾಗ ಸಿಕ್ಕಿದ ಹತ್ತರ ನೋಟೊಂದನ್ನು ಕೊಟ್ಟುಬಿಟ್ಟೆ. ಭಾರತೀಯ ರಿಸರ್ವ ಬ್ಯಾಂಕು ಮುದ್ರಿಸುವ ಯಾವ ನೋಟನ್ನೂ ಕೊಡಬಹುದು ಎಂದು ಬರೆದದ್ದರಿಂದ ನೊಟಿಗಾಗಿ ಹುಡುಕುವ ಅವಶ್ಯಕತೆಯಿಲ್ಲ. ನೂರಕ್ಕಿಂತ ಜಾಸ್ತಿಯದ್ದನ್ನು ಕೊಟ್ಟರೆ ಅಭ್ಯಂತರವಿಲ್ಲ, ಐದಕ್ಕಿಂತ ಕಡಿಮೆಯದ್ದು ಕೊಡಬೇಡಿ ಎಂದು ಮೊದಲೇ ಮುದ್ರಿಸಿಯಾಗಿತ್ತು!

ಇದು ಹೊಸ ಕತೆಯಲ್ಲ. ಇಂತಹ ಚೀಟಿಗಳು ಕೆಎಸ್ಸಾರ್ಟೀಸಿ ಬಸ್ಸುಗಳಲ್ಲಿಯೂ ಒಂದರ ಹಿಂದೊಂದರಂತೇ ಸಿಗುತ್ತವೆ. ದಾನ ಮಾಡುತ್ತಿರಲಿಲ್ಲ ಮೊದಲು; ಬೇರೆಯವರ ದುಡ್ಡನ್ನು ಬೇರೊಬ್ಬರಿಗೆ ಕೊಡಲಿಕ್ಕೆ ನಾನೇ ಆಗಬೇಕೇ?!
ಇದೇನೂ ಹೊಸ ವಿಷಯವಲ್ಲ. ಜನವರಿಯಲ್ಲಿ ಬರೆದ ಎರಡು ಸಾಲನ್ನು ನೋಡಿ ಡಿಸೆಂಬರಿನಲ್ಲಿ ನಕ್ಕಂತಿದೆಯಷ್ಟೇ. ಅದು ಹೊಸ ಸಾಲಲ್ಲ. ಹಳೆಯ ಮರದ ಎಲೆಯ ಮೇಲೆ ಹಾರನ್ನು ಮಾಡುತ್ತ ಹೋದ ಹೊಸ ಗಾಡಿ ಹಾರಿಸಿದ ಧೂಳು ಅಷ್ಟೇ. ಧೂಳನ್ನು ತೊಳೆಯಲು ಅದೇ ಮಳೆ. ನಂತರ ಒಂದು ಗಾಳಿ. ಗಾಳಿ ಬೀಸಿದೊಡನೆ ನೆನಪಾಗುತ್ತದೆ, ' ಹಿಂದಿನ ರಾತ್ರಿಯೂ ಇಂಥದೇ ಒಂದು ಗಾಳಿ ಬೀಸಿತ್ತಲ್ಲ!' ಎಂದು.

ಹೊಸ ಮರದಡಿಯಲ್ಲಿ ಕೂತು ಸೆರಗಿನಿಂದ ಗಾಳಿ ಬೀಸಿಕೊಳ್ಳುವ ಸುಂದರಿಯ ನೋಡಿಯೇ ಗಾಡಿ ನಿಲ್ಲಿಸಿದ ಡ್ರೈವರನ ಸ್ಟೇರಿಂಗು ಹಿಡಿದ ಕೈ ಬೆವರಾಯಿತಂತೆ. ಸುಂದರಿಯ ಮಾತನಾಡಿಸಿದ. ಮಾತಾಡಲೊಲ್ಲೆನೆಂದಳು. ಕೋಪ ನೆತ್ತಿಗೇರಿತು ಅವನಿಗೆ. ಜಿಡ್ಡುಗಟ್ಟಿದ ಅಂಗೈಗೆ ಸವರಿದ ಕೊಬ್ಬರಿಯೆಣ್ಣೆಯಾದಳು ಸುಂದರಿ. ತಾಯ್ತಂಗಿಯರು ಮೂಕ ಸಾಕ್ಷಿ, ತಮ್ಮ ಅಂಗ ವಿಕಲನಾದ! ಪಶುಗಳ ಜೀವನವೇ ಹೀಗಿರುವಾಗ ಮೃಗಗಳಿಗೇನು ಕೊರತೆಯೇ!!

ಕೊಟ್ಟಿಗೆಯಿಲ್ಲದ ದನಕ್ಕೆ ಕಾಡಾದರೂ ಹುಲಿಯ ಗವಿಯಾದರೂ ವಿಶೇಷವಿಲ್ಲ. ಹತ್ತು ರೂಪಾಯಿಯನ್ನು ಅವಳ ಕೈಯೊಳಗಿಟ್ಟು ಪ್ಯಾಂಟಿನ ಕಿಸೆಯೊಳಗೆ ಕೈ ತುರುಕಿಕೊಂಡು ಬಂದುಬಿಡುವ ನಮಗೆ 'ಛೇ, ಹೀಗಾಗಬಾರದಿತ್ತು' ಎಂಬ ಮರುಕವೊಂದೇ ಬಿಟ್ಟರೆ ಬೇರೆ ಯಾವ ಮಹಾನ್ ಸಾಧನೆಯೂ ಆಗುವುದಿಲ್ಲ. ಇಂಥವರಿಗೋಸ್ಕರ ಯಾವ ರಿಸರ್ವೇಶನ್ನೂ ಇಲ್ಲ. ಯಾವ ಪ್ರತಿಭಟನೆಯೂ ಶಾಂತಿ ಯಾತ್ರೆಯೂ ನಡೆಯುವುದಿಲ್ಲ. ಬದಲಾಗಿ, ಬೇಡಿದ ದುಡ್ಡನ್ನೇ ಕೀಳುವ ಟೀಸಿ ಸಧ್ಯ ಇಷ್ಟಕ್ಕೇ ಬಿಟ್ಟನಲ್ಲ ಎಂಬ ಕಾರಣಕ್ಕೆ ದೇವರಾಗಿಬಿಡುತ್ತಾನೆ.

ನೀರಿಂದ ಮೇಲೆ ಹಾರಿ ಮತ್ತೆ ಮುಳುಗಿ ಕೂರುವ ಕಪ್ಪೆಯ ಹಾಗೇ ಬದುಕು.
ಒಂದು ಕಡೆಯಲ್ಲಿ ದೇಹ, ಇನ್ನೊಂದು ಕಡೆಯಲ್ಲಿ ಜೀವ, ನಡುವೆ ಕಬ್ಬನ್ನು ರಸದಿಂದ ಬೇರ್ಪಡಿಸಿ ಹಿಪ್ಪೆ ಮಾಡಿಬಿಡುವ ಕಿರಾತಕ ಗಾಣ!

ಇವೆಲ್ಲದರ ನಡುವೆಯೊಂದು ಹೊಸ ವರುಷ ಬಂದಿದೆ. ಇದರ ಹೆಸರು 2013. ಹಳೆಯ ಕ್ಯಾಲೆಂಡರನ್ನು ಧೂಳು ಸಹಿತ ತೆಗೆದು ಬದಿಗಿಟ್ಟಾಯಿತು. ಹೊಸತು ಹಳೆಯ ಮೊಳೆಯ ಬೆರಳನ್ನೇ ಹಿಡಿದು ಗೋಡೆಯೇರಿ ಕುಳಿತಿದೆ. ಅದು ಹೊಸದು, ಸ್ವಲ್ಪ ಹುರುಪು. ದಿನ ಕಳೆಯಲಿ ನಾಕಾರು, ತಿಳಿಯುತ್ತದೆ ನಿನಗೂ... ಎಂದು ಮುಸಿ ಮುಸಿ ನಕ್ಕದ್ದು 2012.

ಜನ ಹಳೆಯದಾದರೂ ಕೆಟ್ಟ ಹಳತುಗಳು ಮತ್ತೆ ಬಾರದಿರಲಿ. ಒಳ್ಳೆಯದು ಎಷ್ಟು ಹಳತಾದರೂ ಮರಳಿ ಮರಳಿ ಮರುಕಳಿಸಲಿ. ಸುರಿಯಲಿ ಮಳೆ, ಹಾರಲಿ ಧೂಳು, ನಲಿಯಲಿ ಹಸಿರು, ಪುಟಿಯಲಿ ಎಲ್ಲ ತುಟಿಯಲಿ...... ಫಕ್ಕನೊಮ್ಮೆ ನಗು...