Wednesday, June 17, 2020

ಮೊದಲೊಲವ ಕರೆಗಂಟೆ!


ಕನ್ನಡಿ ಹೇಳೀತೇ ನನ್ನಂದವ?? 

ಮಂಚದ ಮೇಲಿನ ಪುಟ್ಟ ಗೊಂಬೆ ಸಣ್ಣಗೆ ನಗುತ್ತಿತ್ತು. ಬೆನ್ನಿಗೊಂದು ಕಣ್ಣಿಲ್ಲ. ಆದರೇನು ಎಂಬಂತೇ ಮತ್ತೆ ಮತ್ತೆ ತಿರುಗಿ ತಿರುಗಿ ಕನ್ನಡಿಯ ಕಡೆಗೆ ಓರೆ ನೋಟದಲ್ಲಿ ನೋಡಿದವಳ ಕಂಡು ಟೆಡ್ಡಿಯ ಕರಿಮೂತಿಯೂ ಸೊಟ್ಟಗಾಗಿತ್ತು ಹೊಟ್ಟೆಕಿಚ್ಚಿನಿಂದ.
  "ಕನ್ನಡಿಯಾದರೂ ತಾನಾಗಬಾರದೇ...!!" ಎಂದು ಅವನು ಕಳಿಸಿದ ಮೆಸೇಜು ನೆನಪಾಗಿ ನಾಚಿದಳು. 

ಎಲ್ಲ ಮಾತಿಗೂ ಅರ್ಥ ಹುಡುಕಲು ಹೋದೆನೇ ತಾನು? ಅರಿಯದ ಸಂಭ್ರಮವ ಅನುಭವಿಸುವುದೇ ಪ್ರೀತಿ.

ಬೆಳಗಿನಿಂದ ನಾಕು ಬಾರಿ ಖುಷಿಯಿಂದ ಬಾಗಿಲು ತೆಗೆದು ಬೇಸರದಿಂದ ಹಾಕಿದಳು. ತಿಂಗಳಿನಿಂದ ಕಾಯುತ್ತಿದ್ದ ಕ್ಷಣವೊಂದು ಬಂದೇ ಬಿಟ್ಟಂತೆ. ಪ್ರತಿ ಸಲ ಬಾಗಿಲು ತೆಗೆಯುವಾಗಲೂ ಕಣ್ಣುಗಳಲ್ಲಿ ಹೊಸ ಹೊಳಪು; ಹೊಸ ಸೂರ್ಯ ಉದಯಿಸಿದಂತೇ ಮತ್ತೆ ಮತ್ತೆ. ಗಡಿಯಾರಕ್ಕೆ ಅವಸರವಿಲ್ಲ. ಅದು ತಿರುಗುವುದು ಅದರ ನಿಯಮದಂತೇ. ಇಂದು ನನಗಾಗಿ ತಿರುಗು ಒಂಚೂರು ಬೇಗ ಎಂದು ಉಸಿರು ಬಿಗಿ ಹಿಡಿದಳು ಬೆಡಗಿ. ಸೆಕೆಂಡು ಮುಳ್ಳಿನ ವೇಗ ಜಾಸ್ತಿಯಾಯಿತೋ ಎಂದು ತಿಳಿದಿಲ್ಲ, ಅವಳ ಎದೆ ಬಡಿತವಂತೂ ಆಯಿತು. ಮತ್ತೆ ಮತ್ತೆ ಸೆಳೆಯಿತು ಕನ್ನಡಿ. ಪ್ರತಿ ಸಲ ಅದರೆದುರು ನಿಂತಾಗಲೂ ಹೊಸ ಹೊಸತೇ ಭಾವ. ಯಾವ ಅಂಗಡಿಯಲ್ಲಿ, ಯಾವ ಮೂಲೆಯಲ್ಲಿ ಯಾರಿಗೂ ಬೇಡದ ಪೇಪರು ಸುತ್ತಿ ಬಿದ್ದಿದ್ದ ಈ ಕನ್ನಡಿಯಿಂದು ನನ್ನ ಬಿಂಬವ ಹೊತ್ತು ಪಾವನವಾಯಿತು ಎಂದು ಮನದೊಳಗೇ ನಕ್ಕಳು ಕೋಮಲೆ. ಸೊಟ್ಟ ಮೂತಿಯ ಟೆಡ್ಡಿಗೆ ಉರಿಯಾಯಿತು ಮತ್ತೆ. 

ಢಣ್.....‌ ಎಂದು ಸ್ಟೀಲಿನ ಪಾತ್ರೆಗೆ ಚಮಚೆಯಿಂದ ಹೊಡೆದ ಸದ್ದು. ಮತ್ತೆ ಜಾಗೃತವಾಯಿತು ಮನಸ್ಸು. ಎಂದೂ ಕೂತಲ್ಲಿಂದ ಅಲುಗಾಡದ ಚೆಲುವೆಯೆದ್ದು ಓಡಿದ್ದು ಕಂಡು ಗಲ್ಲದ ಮೇಲೆ ಬೆರಳಿಟ್ಟುಕೊಂಡಳು ಅಮ್ಮ. 

ಕಣ್ಣಿನಲ್ಲಿ ಮತ್ತೆ ಕಂತಿದ್ದ ಸೂರ್ಯ ಎದ್ದು ಬಂದ. ʼಕೂಸೆ, ಗೇಟು ಯಾರು ತೆಗೆದಿಟ್ಟದ್ದು? ನೋಡು, ದನದ ಬಾಯಲ್ಲಿ ದಾಸಾಳ ಗಿಡದ ಶ್ರಾದ್ಧವೇ ಆಗೋಯ್ತುʼ, ಅಪ್ಪನ ದನಿಗೆ ಸೂರ್ಯನ ಎದುರು ಕಾರ್ಮೋಡ.

ಎಂದಿಗೂ ನೆನಪಿಗೇ ಬಾರದ ಗಡಿಯಾರವಿಂದು ಸುಮ್ಮನೇ ಶತ್ರುವಾಗಿದೆ. ಎಂದೂ ಶಾಂತವಾಗಿರುವ ಸೆಕೆಂಡಿನ ಮುಳ್ಳು ಇಂದು ಜಗವೆಲ್ಲ ತನ್ನದೇ ಎಂದು ಸದ್ದು ಮಾಡುತ್ತಿದೆ. ಊಟಕ್ಕೆ ಕೂರಲೇ? ಆಗಲೇ ಬಂದರೆ? ಅಪ್ಪ ಏನದು ಎಂದರೆ? 

ಅರ್ಧವೇ ತುಂಬಿದ ನೀರ ತಪ್ಪಲೆಯಲ್ಲಿ ಖಾಲಿ ಲೋಟವೊಂದು ಬಿದ್ದಂತೇ; ಕತ್ತು ಉದ್ದವಾಯಿತು ಗೇಟು ತೆರೆದ ಸದ್ದಿಗೆ. ಎಂಟು ಸೂರ್ಯರ ಉದಯವಾಯಿತು ತುಂಟ ರೆಪ್ಪೆಯ ನಡುವಲಿ. ಕಿರುಚಿ ಬಿಡಲೇ ಅವ ಬಂದ ಖುಷಿಯಲಿ? 

"ಏನದು?"

"ಡ್ರೆಸ್ಸು... ಅವತ್ತೇ ಹೇಳಿದ್ದೆ ಅಲ್ಲ!! ಚಂದ ಇತ್ತು ತರಿಸಿದೆ"    

ಮತ್ತೆ ತೆರೆಯಿತು ಶೃಂಗಾರ ಲೋಕದ ಬಾಗಿಲು.

ನಿನ್ನ ಬಾಗಿದ ತುಟಿಗಳಂಚಲಿ ಹೊರಟ ನಲುಮೆಯ ದನಿಯ ತರಂಗ ಸೇರಲೇ ಇಲ್ಲ ನನ್ನ ಕಿವಿಯ ಇಂದಿಗೂ.... ನನ್ನ ಕಣ್ಣಿಗೆ ಬಿಡುವೇ ಸಿಗಲಿಲ್ಲ ಕೊನೆಗೂ. ನಿನ್ನ ಮಾತನ್ನು ನೋಡುತ್ತಲೇ ಕಳೆದುಬಿಟ್ಟೆ ಸಂಜೆಗಳೆಲ್ಲವನ್ನೂ. ನಿನ್ನ ಕಂಗಳ ಸೂರ್ಯ ಕಂತುವುದೇ ಇಲ್ಲವೇನೋ ನಾ ಕಣ್ಣ ಮುಚ್ಚಿದರೂ. ಹೇಗೆ ಬರೆಯಲಿ ನಾನು ಕಲ್ಲು ಬಂಡೆಯ ನಡುವೆ ನಿನ್ನ ಗಲ್ಲದ ಮೇಲೆ ನನಗೇ ತಿಳಿಯದೆ ಬರೆದ ಚಿತ್ತಾರವನು ಸಾಲುಗಳಲಿ? ಕಡಲ ಹಿನ್ನೀರೂ ಉಪ್ಪೆಂದು ಹುಸಿನಗೆಯ ನಕ್ಕಿದ್ದು ನೀನಲ್ಲವೇ! ನಿನ್ನ ನೋಟದ ಬೆಳಕು ನನ್ನ ದಾರಿಯ ತೆರೆದಿರಲು, ನಿನ್ನ ನಗುವಿನ ಬೆರಳು ನನ್ನ ಕೈ ಹಿಡಿದು ನಡೆಸಿರಲು, ನನ್ನ ಬದುಕಿನ ರೀತಿ ನೀನಾಗಿ ಒಲಿದಿರಲು, ಆ ನಗೆಯ ಮರೆತು ಕತ್ತಲೆಯ ಗವಿಯಲ್ಲಿ ಕಳೆಯಲಿ ಹೇಗೆ ಉಳಿದೆಲ್ಲ ಜೀವನವ?? - ಒಂದು ಚೀಟಿ, ಪ್ರೀತಿಯ ಸಾಲುಗಳು.

ಮತ್ತೆ ಕಟ್ಟಿತು ಕಳೆ ಕನ್ನಡಿಯ ಲೋಕದಲಿ. ಬುಧವಾರವೇ ಇಂದು? ಅಲ್ಲ. ಮತ್ತೆ ನಾಕು ದಿನ ಕಳೆಯಲಾರೆ ಇದನ್ನೆದುರಿಟ್ಟುಕೊಂಡು. ಮೊದಲ ಸಲ ಒಲವ ಹೆಸರಿಟ್ಟುಕೊಂಡು ಬಂದದ್ದಲ್ಲವೇ! ʼನಿನ್ನ ಮೈಯನಪ್ಪಲು ಕಾದಿಹೆ, ಬಂದಿಹೆ ಗಾವುದ ದೂರದಿಂದ, ಬಹುಗನಸುಗಳ ಸುಂಕ ತೆತ್ತು...ʼ. - ಮತ್ತೊಂದು ಸಣ್ಣ ಚೀಟಿ, ಕಳ್ಳ ಕಾಮನೆಗಳು. 

"ಊಹು, ಅಂದುಕೊಂಡಂತಿಲ್ಲ. ಪೋಟೊದಲ್ಲಿ ಕಂಡಂತಿಲ್ಲ, ಅವಳಿಗೆಂದೇ ಹೊಲಿದ ಡ್ರೆಸ್ಸಿರಬಹುದೇ! ನನಗೇಕೆ ಒಪ್ಪುತ್ತಿಲ್ಲ???" 
ಎಂಟು ಸೂರ್ಯರ ಪ್ರಭೆ ಕಡಿಮೆಯಾಗಲು; ಕನ್ನಡಿ ನಕ್ಕಿತು, ಟೆಡ್ಡಿಯ ಸೊಟ್ಟ ಕಪ್ಪು ಮೂತಿ ನೆಟ್ಟಗಾಯಿತು.

"ಸ್ವಲ್ಪ ಹಿಡಿಸಿದರಾಯಿತು ಸೊಂಟದ ಬಳಿ......" ಎಂದು ಮುಗುಳುನಕ್ಕಳು ಚೆಲುವೆ, ಮತ್ತೆಲ್ಲ ಮೊದಲಿನಂತಾಯಿತು!!

Friday, June 12, 2020

ನಿನ್ನ ಪ್ರೀತಿಗೆ....

ನನ್ನ ಮನಸಿಗೆ ಏನೋ ಅನಿಸಿದೆ
ಹೇಳಿಬಿಡಲೇ ನಿನ್ನಲಿ?
ನೀನೇನೇನೋ ಅಂದುಕೊಂಡರೆ?
ಭಯವೇ ತುಂಬಿದೆ ನನ್ನಲಿ

ನೀ ಹೇಳುವ ಪದಗಳ ಕೇಳಿಕೊಂಡು
ಕೂತುಬಿಡಲೇ ಕನಸಲಿ?
ಅಂದುಕೊಳ್ಳುವ ಕತೆಗಳ ನೀ
ಬಿಡು ಬೇಲಿಯಾಚೆಯ ನೀರಲಿ.

ನಿನ್ನ ಹಾಡಿನ ಹಾಗೆ ನಾನು
ನನ್ನ ಪಾಡಿಗೆ ಇದ್ದೆನು.
ನಿನ್ನ ನಗುವಿನ ಸದ್ದು ಕೇಳಿ
ನಿನ್ನೇ ನೋಡುತ ನಿಂತೆನು.

ಎಲ್ಲೋ ಗುಡುಗಿ ಹೇಗೋ ಮಿಂಚಿ
ನಿನ್ನ ಮುಖವೇ ಕಂಡಿತು
ಶೃಂಗಾರದ ಕಡಲು ಉಕ್ಕಿ ಉಕ್ಕಿ
ಎದೆಯಲಲೆಯ ತಂದಿತು

ಅಲೆಯು ಸೋಕಿದ ನವಿರು ಪಾದದ
ಗುರುತು ಹಿಡಿದು ಹೊರಟೆನು
ದೂರ ತೀರವ ಕ್ರಮಿಸಿ ಕೊನೆಗೆ
ದಿಕ್ಕು ತೋಚದೆ ನಿಂತೆನು


ಗಾಳಿ ಬೀಸಿತು ಸೂರ್ಯ ಕೆಂಪಿನ
ಬಣ್ಣ ತೋಯಿಸಿ ನಕ್ಕನು
ದೂರ ತೀರದಿ ಗಗನದಂಚಲಿ 
ಕಡಲು ನುಂಗಿತು ಜಹಜನು


ನನ್ನ ಕಥೆಗಳ ಹೇಳಿಕೊಳ್ಳಲೆ
ನಿನ್ನ ಪ್ರೀತಿಯ ಸಂಜೆಗೆ?
ನಿನ್ನ ಕಣ್ಣಲೆ ಮುಳುಗಿ ಹೋಗುವೆ
 ಕುರುಡನಾಗುವೆ ಬೆಳಕಿಗೆ!!

Sunday, April 26, 2020

ಬ್ರಹ್ಮಚರ್ಯವೇ......


                         

“ಐತಾಳರೇ, ನಿಮಗೊಬ್ಬ ಮಗ ಇದ್ದಾನಲ್ಲ, ನೀಲಕಂಠ, ಅವ ಬೆಂಗಳೂರೇ ಅಲ್ವೇ?”

ಹೂ, ಅವಂದು ಈಗ ದೊಡ್ಡ ಹುದ್ದೆ. ಅವನ ಮಾತಾಡ್ಸುದೇ ಕಷ್ಟ ಈಗ"

ನೋಡ್ಲಿಕ್ಕೆ ಸ್ವಲ್ಪ ಉಪರಾ ತಪರಾ ಆದ್ರೂ ಮಾಣಿ ಗನಾದು

ಛೇ, ಎಂತದು ನೀವು ಹಾಗೆ ಹೇಳೂದು? ಮಾಣಿಯ ಗುಣವೂ ಗನಾದು, ಮಾಣಿಯೂ ಗನಾದು.  ನಿಮಗೆಂತಕ್ಕೆ ಈಗ ಅದರ ನೆನಪಾದದ್ದು??”

ಒಂದೊಂದ್ ಸಲ ಏನಾಗ್ತದೆ ಅಂದ್ರೆ, ಈ ದನಕ್ಕೆ  ಒಳ್ಳೆ ಹೋರಿ ಸಿಗದೇ ಇದ್ರೂ ಈ ಟ್ಯೂಬ್ ಉಂಟಲ್ಲ, ಅದ್ನೇ ಬಳಸ್ಬೇಕು

ಒಂದೇ ಸಲಕ್ಕೆ ಮನೆಯಿಂದ ಕೊಟ್ಗೆಗೆ ನಡೆದಿರಿ??”

ಒಂದೊಂದ್ ಸಲ ಸನ್ನಿವೇಶಕ್ಕೆ ಮಾತು ಹೊಂದಾಣಿಕೆ ಆಗ್ಬೇಕಲ್ಲ ಮಾರಾಯ್ರೆ!!”

ನಿಮ್ಮ ಈ ಒಗಟು ಮಾತ್ರ ನಂಗೆ ಜಗಟೇ ಯಾವತ್ತೂ"

ಹ ಹ ಹ, ನಂಗೆ ಒಂದು ಆಲೋಚನೆ ಬಂತು ಐತಾಳರೇ, ನಾವು ಅಕ್ಕ ಪಕ್ಕದ ಮನೆಯವರು, ಸ್ನೇಹಿತರು. ದಿನಕ್ಕೆ ನಾಕು ಮಾತಾಡಿ ಮೂರನ್ನ  ಬಿಡ್ತೇವೆ. ನಿಮಗೆ ಗೊತ್ತಲ್ಲ, ನನ್ನ ಅಣ್ಣನ ಮಗಳು. ದೊಡ್ಡವಳು. ಒಬ್ಬಳೇ ಕೂತು ಭಾಳ ಬೇಜಾರ್ ಮಾಡ್ಕೊಳ್ತಾಳೆ ತನ್ನ ಜೀವನ ಹೀಗಾಗೋಯ್ತು ಅಂತ. ಹೇಗಿದ್ರು ನಿಮ್ಮ ಮಗನಿಗೂ ೩೮ ಆಯ್ತಲ್ಲ. ಅದ್ಕೆ ಯೋಚ್ನೆ ಮಾಡ್ತೇ ಇದ್ದೆ."

“ನೀವಿದ್ದೀರಲ್ಲ, ಭಯಂಕರ ಕನ್ನಿಂಗ್ ನೀವು. ಆದರೂ ನಮ್ಮ ಕೊಟ್ಗೆ ಹೋರಿಗೆ ಮನೇಲೆ ಆಕಳು ಸಿಗುದಾದ್ರೆ ಒಂದ್ ಹುಲ್ ಕಟ್ ಹಾಕ್ಲಿಕ್ಕೆ ನಮಗೆ ತೊಂದ್ರೆ ಇಲ್ಲ.”

ನಾನು ಮುಂದಿನ ವಾರ ಬೆಂಗ್ಳೂರಿಗೆ ಹೋಗ್ತೇನೆ, ನಿಮ್ಮ ಮಗನ ಅತಪತ ಕೊಡಿ, ಒಂದ್ ಸರ್ಪ್ರೈಸ್ ವಿಸಿಟ್ ಕೊಟ್ ಬರುವ ಅಂತ ಉಂಟು"

ನೀವು ಹೇಳ್ದಾಂಗೆ"

                                                     ********************************
“ಫಕೀರಪ್ಪ, ಸಾಕಾಗೊಯ್ತು ಮಾರಾಯ, ಇನ್ನು ನನ್ನತ್ರ   ಆಗೂದಿಲ್ಲ. ಕೊಳ್ಳಿ ಇಡುಕೂ ಯಾರೂ ಇರುದಿಲ್ವ ಹೇಳಿ”

“ನೀವು ಹೀಗೆ ಸೂರ್ಯ ಮುಳುಗುದೇ ಕಾಯ್ಕಂಡ್ ದೀಪಕ್ಕೆ ಎಣ್ಣೆ ಹಾಕ್ತೀರೋ ಬಿಡ್ತೀರೋ, 38 ಆಯ್ತು ಹೆಂಗಿದ್ರೂ. ಕೊಳ್ಳಿ ಎಂತಕ್ಕೆ? ತನ್ನಿಂತಾನೇ ಉರೀತದೆ ಬಿಡಿ”.

“ಆ್ಯ.... ನಿಂಗ್ಹೆಂಗ್ ಗುತ್ತಾಗ್ಬೇಕು ನನ್ನ ಕಷ್ಟ? 40 ವರ್ಷಕ್ಕೇ ನಾಕ್ ಮದ್ವೆ ಆದವ, ಗೊಬ್ಬರಗುಂಡಿ ನೀನು. 20 ವರ್ಷಕ್ಕೆ ಶುರು ಮಾಡಿದ್ರೂ, 5 ವರ್ಷಕ್ಕೊಂದು ಸಂಸಾರ ನಿಂಗೆ. ನನ್ನ ಬಾಡಿ ವಣಗ್ಲಿಕ್ಕೆ ಬಂತು.”

“ನಿಮ್ ಅವತಾರ ನೋಡಿ ಯಾರ್ ಬರ್ತಾರೆ? ನೀವು ಹೊರಗಡೆ ಹೋದ್ರೆ ಚಂದ ಮಾತಾಡ್ತಾರೆ ನಿಮ್ ಡ್ರೆಸ್ ನೋಡಿ. ರೋಮಿಗೆ ಬಂದ್ರೆ ಹೆಂಡ್ತೀನೂ ನಿಲ್ಲುದಿಲ್ಲ.”

“ಸುಮ್ನಿರ ಗೊತ್ತುಂಟು. ಸಾಯುದ್ರೊಳ್ಗೆ ಒಂದ್ ಮದ್ವೆ ಆಗ್ತೇನ, ನೋಡ್ತಿರು.”

“ನಿಮ್ಮ ಉದ್ದೇಶ ಅದೊಂದೇ ಅಲ್ವ?”

“ ನಿನಗೆ ಆ ಮಗ ಈ ಮಗ ಅಂತ ಬಯ್ಯುದ್ರೊಳಗೆ ಒಳಗೆ ಹೋಗಿ ಮಲಗು ಮಗನೆ”

“ನೀವು ಬೈದ್ರೆ ಬೈಸ್ಕೊಂಡು ಹೋಗ್ತೇನೆ ಅಂತವಾ?”

ಘೋರ ಯುದ್ಧ ನಡೆದು ಕತ್ತಲೆಯಾಯಿತು.

ಬೆಳಗಾಗುವುದರಲ್ಲಿ ರೂಮೆಲ್ಲ ಅಲ್ಲೋಲ ಕಲ್ಲೋಲ. ಫಕೇರಪ್ಪ ಒಂದು ಮೂಲೆಯಲ್ಲಿ ಅರೆವಸ್ತ್ರಾವತಾರದಲ್ಲಿ ಬಿದ್ದಿದ್ದರೆ ಐತಾಳನ ಅವತಾರ ಅದಕ್ಕಿಂತಲೂ ಕಮ್ಮಿಯೇ. ಹಾಸಗೆಯ ಪಕ್ಕದಲ್ಲೊಂದು ಬ್ಲೆಂಡರ್ಸ್ ಪ್ರೈಡ್ ಬಾಟಲಿ, ಪಕ್ಕದಲ್ಲೊಂದು ಪ್ಲಾಸ್ಟಿಕ್ ಗ್ಲಾಸು. ಒಂದಷ್ಟು ಅರ್ಧ ಚಲ್ಲಿದ ಖಾರಾ ಬೂಂದಿ, ಶೇಂಗಾ ಪೆಕೆಟ್ಟು. ನೆಲಕ್ಕೆ ಚೆಲ್ಲಿದ ಪಪ್ಪಾಯ ಹೋಳುಗಳು, ನೆಪಮಾತ್ರಕ್ಕೆ ಅಲ್ಲಿಯೇ ಕುಳಿತಿದ್ದ ಬಿಳಿಯ ಮೈಮೇಲೆ ಹೂವಿನ ಚಿತ್ತಾರದ ಪ್ಲೇಟುಗಳು. ಕಾಲ ಬಳಿ ಬಿದ್ದರುವ ಬಿಳಿಯ ಬನಿಯನ್ನು, ಫ್ಯಾನಿಗೆ ನೇತಾಡುತ್ತಿರುವ ಖಾಸಾ ವಸ್ತ್ರ; ಯುದ್ಧದ ಭೀಕರತೆಯನ್ನು ಸಾರುತ್ತಿದ್ದವು.

ಇವೆಲ್ಲವುಗಳ ಮಧ್ಯ ಮತ್ತಿನ ನೆತ್ತಿಗೆ ಸುತ್ತಿಗೆಯಿಂದ ಬಡಿದಂತೇ ಕಾಲಿಂಗ್ ಬೆಲ್. ಹತ್ತು ಸಲ ನೆತ್ತಿಯ ಮೇಲೆ ಕುಟ್ಟಿದ ಮೇಲೆ ಹೋದ ಜೀವ ಬಾಯಿಗೆ ಬಂದಂತಾಗಿ ಎದ್ದುನಿಂತ ಐತಾಳನಿಗೆ ಅಂತರಿಕ್ಷದಲ್ಲಿ ಬಾಯಾರಿಕೆಗೆ ನೀರು ಸಿಕ್ಕದ ಪರಿಸ್ಥಿತಿ. ನಿಲ್ಲದ ಕಾಲಿಂಗ್ ಬೆಲ್ಲಿನ ಬಡಿದಾಟ. “ಚೊಣ್ಣ ಏರಿಸ್ಕಳೋ ಐತಾಳಾ....” ಎಂದು ಮಗ್ಗುಲು ಮರಿದ ಫಕೀರಪ್ಪ. ಸರ್ರನೆ ಪಕ್ಕದ ಟುವಾಲು ಸುತ್ತಿ ಬಾಗಿಲು ತೆಗೆದ ಐತಾಳನಿಗೆ ಎದುರಿಗೆ ಕಂಡದ್ದು, ಪಕ್ಕದ ಮನೆಯ ಸುಬ್ರಾಯ ಮಾವನೊಂದಿಗೆ ಹುಬ್ಬೇರಿಸಿ ನಿಂತಿದ್ದ ಅಪ್ಪಯ್ಯ. ಯುದ್ಧಾರ್ಧದಲಿ ಮಾಯವಾಗಿದ್ದ ಗ್ರಹಚಾರದ ಕರೆಂಟೂ ಸಟ್ಟನೆ ಬಂದೆರಗಿ, ಫ್ಯಾನು ತಿರುಗಿ, ಖಾಸಾ ವಸ್ತ್ರ ಸುಬ್ರಾಯ ಮಾವನ ಮುಖಕ್ಕೆರಗಿ...........

ಐತಾಳ ಮುವತ್ತೆಂಟನೆಯ ವರ್ಷವನ್ನೂ ಬ್ರಹ್ಮಚರ್ಯದಲ್ಲೇ ಸವೆಸಿದ.......