Wednesday, August 22, 2012

ಕೂಸು ಕುಮಾರಿಯೂ…. ಸಾಬಿ ಕುಮಾರನೂ….


ಓಡಿ ಹೋಗುವವರ ಹಿಡಿಯಲಿಕ್ಕಾಗದು. ಓಡುವವರ ಹಿಂದೆ ಓಡಿದರೆ ಸ್ಕೂಟರಿನ ಹಿಂದೆ ಅಟ್ಟಿಸಿಕೊಂಡು ಹೋಗುವ ನಾಯ ಪಾಡಾಗುವುದು. ಯಾರೋ ಓಡಿ ಹೋದರೆಂಬ ಸುದ್ದಿಯ ಕೇಳಿ ಉದ್ದುದ್ದ ಭಾಷಣದಂತಹ ನ್ಯೂಸುಗಳು ನ್ಯೂಸೆನ್ಸುಗಳು. ಅದಕ್ಕಾಗಿ ವಾದ- ಅಪವಾದಗಳು. ಸರಿಯೋ- ತಪ್ಪೋ?! ಹೆಚ್ಚು ಮತ ಯಾವುದಕ್ಕೋ ಅದು ತಪ್ಪಾಗಿದ್ದರೂ ಸರಿ. ಕಡಿಮೆ ಮತದ ಸರಿಯೂ ತಪ್ಪೇ!

ನಾ ಹುಟ್ಟಿದ ಹವ್ಯಕ ಕೇರಿಯಲ್ಲಿಯೂ ಮಾಣಿ ಎಂದುಕೊಂಡು ರಿಕ್ಷಾ ಓಡಿಸುವ `ನಾಯ್ಕಮಾಣಿ’ ಯೊಂದಿಗೆ ಓಡಿಹೋಗಿದ್ದ ಕೂಸು ವಾಪಸು ಬಂದು ಮನೆಯಲ್ಲೇ ಇದ್ದದ್ದನ್ನು ಕಂಡಿದ್ದೇನೆ. ಮದುವೆಯಾಗಿ ಮಕ್ಕಳಾದ ಸುದ್ದಿಯಿನ್ನೂ ಬಂದಿಲ್ಲ. ಪಕ್ಕದೂರಿನ ಮುಸ್ಲಿಂ ಹುಡುಗಿ ದೂರದ ಬೆಂಗಳೂರಿನ ಮೋಹಕ್ಕೆ ಬಿದ್ದು ಕ್ರಿಶ್ಚಿಯನ್ ಹುಡುಗನೊಂದಿಗೆ ಮನೆಯವರ ಕೈಗೆ ಸಿಕ್ಕು ಕಡಿಗಲ್ಲಿನಲಿ ರಪ್ಪ ರಪ ಹೊಡೆತ ತಿಂದು ಸತ್ತ ಕತೆಯ ಕೇಳಿದ್ದೇನೆ. ಇಲ್ಲಿ ಯಾರೋ ಕೂಸು ಸಾಬಿಯೊಂದಿಗೆ ಮೂರನೇ ಬಾರಿಗೆ ಓಡಿ ಹೋಗಿ ಹತ್ತಾರು ದಿನಗಳ ನಂತರ ಉಡುಪಿಯ ಹತ್ತಿರದಿಂದ ವಾಪಸು ಕರೆತಂದರಂತೆ! ಓಡಿ ಹೋದರೆ ಕೈಗೆ ಸಿಗಬಾರದು. ಕೈಗೆ ಸಿಗುವಂತಿದ್ದರೆ ಓಡಿ ಹೋಗಬಾರದು! ಆದರೆ ಹುಚ್ಚು ಜನ ಸ್ಟ್ರೈಕ್ ಎನ್ನುವಂಥಾದ್ದೇನೋ ಮಾಡಿದರು. `ಜಾತಿ’ಯನ್ನು ನಡುವೆ ತಂದರು. ಒಂದು ದಿನ ಹಾಳು ಮಾಡಿದರು. ಅಷ್ಟೂ ತಿಳಿಯುವುದಿಲ್ಲವೇ ಓಡಿ ಹೋಗುವವರ ಮನಸಿನಲ್ಲಿ ಏನಿತ್ತು ಎಂದು! ಅಷ್ಟೂ ತಿಳಿಯುವುದಿಲ್ಲವೇ ಸಿಕ್ಕಿ ಬೀಳುವವರ ಮನಸಿನಲ್ಲಿ ಏನಿತ್ತು ಎಂದು! ಎಲ್ಲರೂ ಅವರವರ ಪ್ಯಾಂಟನ್ನು ಮಾತ್ರ ಹಾಕಬೇಕು, ಯಾಕೆಂದರೆ ನಾನು ನನ್ನ ಪ್ಯಾಂಟನ್ನು ಮಾತ್ರ ಹಾಕುತ್ತೇನೆ ಎಂದರೆ ಆದೀತೇ? ಇದು ಪ್ಯಾಂಟಿಗೆ ಮಾತ್ರವೇ ಸಂಬಂಧಿಸಿದ ವಿಷಯ. ಅಪಾರ್ಥ ಬೇಡ!

ಇಲ್ಲಿ ಯಾವುದೂ ಮೂಗಿನ ನೇರಕ್ಕೆ ನಡೆಯುವುದಿಲ್ಲ.

ಸಂಸಾರ, ಸಂಸ್ಕಾರ, ಬಾವನೆ, ಸಮಾಜ, ಸುಖ, ದುಃಖ, ಪುರಾಣ, ವಚನ, ಇತಿಹಾಸ, ಪೂರ್ವೋಚ್ಛರಿತ, ಪೂರ್ವ ಚರಿತ, ಪೂರ್ವಾಗ್ರಹ, ಪೂರ್ವಾರ್ಜಿತ…. ಯಾರೂ ಯಾವುದನ್ನೂ ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ. ಪ್ರೀತಿಯೇ ಬಂಧನವಾಗುವ ಇಂದಿನ ಪರಿಸ್ಥಿತಿಯಲ್ಲಿ ಅಭಿಮಾನ ಹಿಂಸೆಯಾಗದಿದ್ದೀತೇ?

ಮಗ ಬೇರೆ ಜಾತಿಯವಳನ್ನ ಮದುವೆಯಾದ ಎಂಬ ಕಾರಣಕ್ಕೆ ಅಪ್ಪ ಮನೆಯ ಬಾಗಿಲನ್ನೇ ಹಾಕಿ ಕುಳಿತ. ಸೊಸೆ ತನ್ನ ಮಗನಿಗೆ ದೇವರಿಗೆ ನಮಸ್ಕಾರ ಮಾಡಲಿಕ್ಕೆ ಕಲಿಸಿದಳು. ಮಗನ ಸಾಫ್ಟವೇರ್ ಇಂಜಿನೀಯರಿಕೆಗೆ ಮೆಚ್ಚಿ ಇನ್ನೊಬ್ಬ ಅಪ್ಪ ಅಂಥದೇ ಹುಡುಗಿ ಹುಡುಕಿ ಜಾತಕ ಹೊಂದಿದ ಭರವಸೆಯಲ್ಲಿಯೇ ಮದುವೆ ಮಾಡಿದ. ತೊಟ್ಟ ಸಾಫ್ಟವೇರ್ ಹರಿದು ಹೋದೀತೆಂದು ಹೆದರಿ ದೇವರಿಗೆ ದೀಪ ಹಚ್ಚುವುದನ್ನೇ ಬಿಟ್ಟುಬಿಟ್ಟಳು ಸೊಸೆ!

ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ ಯಾರೂ!

ಯಾವುದು ಮರವೆಯಾಗುತ್ತಿದೆಯೋ ಅದರದ್ದೇ ಬಡಬಡಿಕೆ ಶುರುವಾಗುವುದು. ದಿನವೂ ಬುಡಬುಡಕೆಯೊಂದಿಗೆ ಹೇಳಬೇಕು; ಕನ್ನಡದವರಿಗೆ ಕನ್ನಡ ಮಾತಾಡಿ ಎಂದು. ಬ್ರಾಹ್ಮಣರಿಗೆ ಬ್ರಾಹ್ಮಣ್ಯ ಕಾಪಾಡಿ ಎಂದು, ದೇವರಿಗೆ ಕೈಮುಗಿ ಎಂದು!
ಎಲ್ಲ ವಿಪರ್ಯಾಸವೇ!

ತಲತಲಾಂತರಗಳಿಂದ ನಂಬಿಕೊಂಡು ನಡೆದುಕೊಂಡು ಬಂದ ದೇವರು ಒಮ್ಮೆಲೇ ಸುಳ್ಳಾಗಿಬಿಡುತ್ತಾನೆ!

ಮಂತ್ರ ಪಠಣವನ್ನಾಲಿಸಿದರೆ ಕಾದ ಸೀಸವನ್ನು ಕಿವಿಯಲ್ಲಿ ಹೊಯ್ಯುತ್ತಿದ್ದರಂತೆ ಈ ಬ್ರಾಹ್ಮಣರು…. ಎಂಬ ಯಾವುದೋ ಕಾಲದ ಮಾತನ್ನು ಇಂದಿಗೂ ಚಪ್ಪರಿಸಿಕೊಂಡು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾನೆ ಒಬ್ಬ!

ದೇವರಿಲ್ಲ ಎಂದು ಜಾತಿ ಬದಲಿಸಿದವ ಜ್ಞಾನಪೀಠಿಯಾಗುತ್ತಾನೆ. ದೇವರಿಲ್ಲ ಎಂಬ ವಾದವೇ ಜ್ಞಾನ ಎಂದು ಎಸ್ಸೆಮ್ಮೆಸ್ಸು ತೀರ್ಮಾನ ಕೊಡುತ್ತದೆ.

ತಿರುಪತಿ ತಿಮ್ಮಪ್ಪನೂ ಮೊಬೈಲಿನ ಸಿಗ್ನಲ್ಲಿನ ದೆಸೆಯಿಂದ ಶಕ್ತಿಹೀನನಾಗಿದ್ದಾನೆ ಎಂದು ನ್ಯೂಸ್ ಚಾನಲ್ಲೊಂದರಲ್ಲಿ ಅರ್ಧ ಗಂಟೆಯ ಉಪಸಂಹಾರ ನಡೆಯುತ್ತದೆ.

ದೇವರು ಇದ್ದಾನೋ ಇಲ್ಲವೋ ಎಂಬ ಚರ್ಚೆಯೊಂದು ಅವಶ್ಯಕವೇ? ಇಷ್ಟವಿದ್ದವ ಭಜನೆ ಮಾಡುತ್ತಾನೆ, ಇಲ್ಲದಿದ್ದವ ಕೆಲಸ ಮಾಡುತ್ತಾನೆ!

ಹೇಳುವ ಉದ್ದೇಶ ಒಳ್ಳೆಯದೇ ಇರಬಹುದು. ಕೇಳುವ ಮನಸು ಹೇಗೆ ಯೋಚಿಸುವುದೋ ಯಾರಿಗೆ ಗೊತ್ತು! ವೇದಘೋಷವನ್ನೂ ಖಾಲಿ ಬಕೆಟ್ಟಿನಲ್ಲಿ ಬೀಳುತ್ತಿರುವ ನಲ್ಲಿ ನೀರಿನ ಶಬ್ದ ಎನ್ನುವವರಿಲ್ಲವೇ!? ಅವರೂ ಬ್ರಾಹ್ಮಣರೇ!
ತಪ್ಪು ತಿಳಿಯಬೇಡಿ ಯಾರೂ! ನನಗೆ ಸುಳ್ಳು ಫೋಸು ಕೊಟ್ಟು ಕೆಮೆರಾದ ಎದುರು ನಿಲ್ಲಲಿಕ್ಕೆ ಬರುವುದಿಲ್ಲ.

ಯಾರೂ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿಲ್ಲ. ಅವರಿಗೆ ಅವರದ್ದೇ ಗೊಂದಲ, ಅವಸರ. ‘ಸೂರ್ಯಂಗೇ ಟಾರ್ಚಾ?’ ಎಂದು ಹಳೇ ಟೇಪ್ರೆಕಾರ್ಡರ್ ನಲ್ಲಿ ರೀಲು ಸುತ್ತಿಕೊಂಡಾಗ ಬರುವ ಸ್ವರದಲ್ಲಿ ಕೇಳುವವರ ಮುಂದೆ……….

ತಮ್ಮ ಮನೆಯ ನಾಯನ್ನು ಸರಿಯಾಗಿ ಸರಪಳಿ ಹಾಕಿ ಬಿಗಿದು ಸರಿಯಾದ ಜಾಗದಲ್ಲಿ ಕಟ್ಟಿ ಹಾಕದೇ ರಾತ್ರಿ ಹುಲಿ ಹೊತ್ತೊಯ್ದಿತು ಎಂದು ಹುಲಿಗೆ ಬಲೆ ಬೀಸಿ, ಅದರ ಹೊಟ್ಟೆಯೊಳಗಿನ ಜೀರ್ಣವಾದ ನಾಯಿಗೆ ರೋದಿಸುವವರ ಮುಂದೆ………

….. ನಾನು ಸಣ್ಣವ. ನೋಡಿದೆ, ಸುಮ್ಮನೆ ಬಂದೆ. ಅಷ್ಟೇ!

ಯಾರೋ ಓಡಿಹೋದರು ಎಂಬ ಸುದ್ದಿಗೆ ಅರ್ಧಸಾವಿರ ಕಮೆಂಟು! ವಿಷಯ ಖರೆಯೋ ಸುಳ್ಳೋ ಆಮೇಲೆ. ಶುರುವಾಗಲಿ ಆಟ. ಗೆಲ್ಲುವವರ್ಯಾರಾದರಾಗಲಿ, ನಂದೂ ಒಂದು ಕವಡೆಯಿರಲಿ…….

ವಿ.ಸೂ.: ಇಲ್ಲಿ ಬರೆದದ್ದೆಲ್ಲ ನಾನು ಕೇಳಿದ್ದು ಮತ್ತೆ ನೋಡಿದ್ದು ಮಾತ್ರ. ಯಾವುದಾದರೂ ಸಾಲು ಕಲ್ಪನೆ ಅನಿಸಿದಲ್ಲಿ ದಯವಿಟ್ಟು ಕ್ಷಮಿಸಿ.
ಮತ್ತೊಂದು ವಿ.ಸೂ.: ಇದನ್ನು ಯಾರಾದರೂ ಕೋಮುವಾರು ಅಥವಾ ಜಾತ್ಯಾವಾರು ತೆಗೆದುಕೊಳ್ಳುವ ಮುನ್ನ, ಮಧ್ಯಾನ್ನ ಕೆರೆಯ ಬಳಿ ಕಟ್ಟೆಯ ಮೇಲೆ ಬಟ್ಟೆ ತೊಳೆದಲ್ಲಿ ಕಟ್ಟೆ ಸಾಫಾಯಿತೋ ಬಟ್ಟೆ ಸಾಫಾಯಿತೋ ಎಂದು ದೃಢಪಡಿಸಿಕೊಳ್ಳಿ!

5 comments:

  1. ಸೂಪರೋ..

    ಅದೇ ಲಯದಲ್ಲಿ ಕೊನೆವರೆಗೂ ಹೆಂಗೆ ಬರಿತ್ಯೋ ಮಾರಾಯ..
    ವಿಷ್ಯ, ಶೈಲಿ ಎಲ್ಲಾ ಮತ್ತೊಂದು ಸಲ ಇಷ್ಟ ಆತು :-)

    ReplyDelete
  2. ಮಾತು ಕಮ್ಮಿ ಆದರೂ ಮಾಣಿ ಚೊಲೋ ಬರೇತ.

    ReplyDelete
  3. ಬಾಳ ಚೆಂದಿದ್ದು ಬರದ್ದು. ಶೈಲಿನೂ ಚೆಂದಿದ್ದು ವಿಷ್ಯ ಪ್ರತಿಪಾದನೆನೂ ಚೆಂದಿದ್ದು. ಹೀಂಗೇ ಬರೀತಾ ಇರು.

    ReplyDelete
  4. ಸರ್ವರಿಗೂ ಧನ್ಯವಾದ

    ReplyDelete