Tuesday, August 14, 2012

ಒಬ್ಬ ಮಾಣಿಯ ಅಪ್ಪ!


'ಮೂರನೇ ಕ್ಲಾಸಿನಲ್ಲಿ ಮೂರುಸಲ ಫೇಲಾದವನಂತೆ ಅವ ಎಂದು ಮಾಸ್ತರು ಅಸಡ್ಡೆ ಮಾಡಿದ್ದಕ್ಕೇ ಎಸ್ಸೆಲ್ಸಿಯಲ್ಲಿ ರೆಂಕ್ ಬಂದನಂತೆ!' ಎಂದು ದೊಡ್ಡಗೆ ನಗೆ ಹೊಡೆದ ಸುಬ್ರಾಯಜ್ಜ. ಈ ಹಳ್ಳಿಯಲ್ಲಿ ಹೌದೋ ಅಲ್ವೋ, ಈ ಶಾಲೆ ಶುರುವಾದಾಗ್ಲಿಂದ ನೋಡ್ತಿದ್ದೇನೆ ಮಾರಾಯ, ಒಬ್ಬನೇ ಒಬ್ಬ ಕಲಿತ ಮಾಸ್ತರ ಬಂದದ್ದಿದ್ರೆ ಹೌದಂತಿದ್ದೆ ನಾನು ಎಂದು ಮತ್ತೆ ನಕ್ಕು ಸುಮ್ಮನಾದ. ಅದು ಅವನ ಚಾಳಿ. ನಿಮಿಷಕ್ಕೊಂದು ಮಾತನಾಡಿ ಎರಡು ನಿಮಿಷ ಸುಮ್ಮನಿರುವುದು. ಪಕ್ಕದಲ್ಲಿರುವವನಿಗೆ ವಿಷಯ ಮರೆತೇ ಹೋಗಿರುತ್ತದೆ ಮತ್ತೆ ಅವ ಮಾತನಾಡುವುದರೊಳಗೆ. ಇಂತಹ ಸುಬ್ರಾಯಜ್ಜನೂ ಇಂದು ಮಗ ಸೊಸೆಯರೊಂದಿಗೆ ಬೆಂಗಳೂರಲ್ಲಿದ್ದಾನೆ. ಇಲ್ಲಿರುವ ತುಂಡು ಬೂಮಿಯಲ್ಲಿ ತುಂಡು ಕಚ್ಚೆ ತೊಳೆಯುವುದಕ್ಕೆ ಸೋಪೂ ಬರುವುದಿಲ್ಲೆಂದು ಮಗ ಎಚ್ಚರಿಸಿದ್ದಕ್ಕೆ ರಾತ್ರೋರಾತ್ರಿ ತನ್ನ ಅಳಿದುಳಿದ ಬದುಕನ್ನೆಲ್ಲ ಹುಟ್ಟಿದ ಮನೆಯಲ್ಲಿಯೇ ಕಳೆಯಬೇಕೆಂಬ ಸ್ವಂತ ನಿರ್ಧಾರವನ್ನೇ ಬದಲಿಸಿ ಮಗನೊಂದಿಗೆ ಬೆಂಗಳೂರಿಗೆ ಹೊರಡಲೆದ್ದು ನಿಂತಾಗ ತನ್ನ ಮಜಬೂರಿಯನ್ನು ನೆನೆದು ಒಂದು ಹನಿ ಕಣ್ಣೀರು ಗಲ್ಲದ ಮೇಲಿಳಿಯಿತು.

                      ಚಿಕ್ಕಂದಿನಲ್ಲಿ, ಮಳೆಗಾಲದಲ್ಲಿ ಅಂಗಳದಲ್ಲಿ ಜಾರಿಬಿದ್ದು ಸೊಂಟವುಳುಕಿ ಮೂರೇ ದಿನದಲ್ಲಿ ಸುಬ್ರಾಯಜ್ಜನ ತಾಯಿ ತೀರಿಕೊಂಡರು. ಇವನಿಗೆ ಮೀಸೆ ಬಂದು ದೇಶವೇ ಕಾಣದ ಸಮಯದಲ್ಲಿ, ತೋಟದಲ್ಲಿ ಕೊಳೆತ ಅಡಕೆ ಹಾಳೆಯ ಮೇಲೆ ಕಾಲಿಟ್ಟು ಜಾರಿದ ರಭಸಕ್ಕೆ ಗಾಳಿ ಮಳೆಗೆ ಮುರಿದು ಬಿದ್ದಿದ್ದ ಅಡಕೆ ಮರದ ಚೂಪು ತಲೆಗೆ ಜಪ್ಪಿ ಅಲ್ಲಿಯೇ ಅವನ ತಂದೆಯ ಉಸಿರು ನಿಂತಿತು. ಸುಬ್ರಾಯ ರಾತ್ರೋರಾತ್ರಿ ಅನಾಥನಾಗಿ ಹೋದ. ಅಂತಹ ಸಂದರ್ಭದಲ್ಲಿ ಅವರೇ ಪೋಷಿಸಿ ಬೆಳೆಸಿದ ತೋಟ ಗದ್ದೆಗಳು ಇ0ದು ಅವರ ಮಗನ ಹೊಟ್ಟೆ-ಬಟ್ಟೆ-ಓದಿಗೆ ಆಸರೆಯಾದದ್ದು ಹಳೆಯ ಮಾತು. ಅದೇ ತೋಟ, ಮನೆಯನ್ನು  ರಾತ್ರಿ ಬೆಳಗಾಗುವುದರೊಳಗೆ ಬಿಟ್ಟೆದ್ದು ಮಗನೊಂದಿಗೆ ಹೊರಟಾಗ ಅಲ್ಲಿ ಮಗನಿಗೆ ಸ್ವಂತ ಮನೆಯಿಲ್ಲದೇ ಬಾಡಿಗೆ ಮನೆಯೆಂಬುದು ತಿಳಿದಿದ್ದರೂ ಊರ ಮನೆಯ ಮೋಹ ಕಿಂಚಿತ್ತೂ ಕಾಡಲಿಲ್ಲ. ಅಂತೂ ಇಷ್ಟು ವರ್ಷ ಉಳಿದು ಬೆಳೆದ ಮನೆಯನ್ನು ಅನಾಥವಾಗಿಸಿ ಪಯಣ ಹೊರಡುವ ಮುಂಚೆ ಅವರಿಗೆ ನೆನಪಾದದ್ದು ಹೆಂಡತಿ ಸರಸ್ವತಿ. ಅವಳ ನೆನೆದು ನಕ್ಕು ನಕ್ಕು ನರಗಳೆಲ್ಲ ಸಡಿಲವಾಗಿ ಇನ್ನೊಂದೆರಡು ವರ್ಷ ಆಯಸ್ಸು ಹೆಚ್ಚಿದಂತೆನಿಸಿತು. ಆ ಮಹಾತಾಯಿಯ ಕಥೆಯನ್ನೇನು ಕೇಳುತ್ತೀರಿ! ಅವಳ ಕತೆಯೊಂದು ಅವರಿಗೆ ದುಃಖದ ವಿಷಯವಾಗಿರದೇ ಹಾಸ್ಯದ ವಿಷಯವಾಗಿ ಅವರೇ ಊರವರೊಂದಿಗೆ ಬಾಯಿ ಚಪ್ಪರಿಸಿಕೊಂಡು ಹೇಳುತ್ತಿದ್ದರು. ಈಗಲೂ ಒಮ್ಮೊಮ್ಮೆ ಹೇಳಿಕೊಂಡು ಮನದಣಿಯೆ ನಗುತ್ತಾರೆ.

                 ಅಂದು ಹುಣ್ಣಿಮೆಯ ದಿನ. ದೇವರ ಕೋಣೆಯ ಪಕ್ಕದಿಂದ ಹೊರ ಜಗಲಿಗೆ, 'ಮಗ ಹುಟ್ಟಿದ ಸುಬ್ರಾಯ ನಿಂಗೆ' ಎಂಬ ಸುದ್ದಿಯನ್ನು ತಂದದ್ದು ಕತ್ಲಮನೆ ಶಾಂತಾಮಣಿ. ಅವರ ಮನೆಗೆ ಕತ್ಲಮನೆ ಎಂದು ಯಾಕೆ ಕರೆಯುತ್ತಾರೆ ಎನ್ನುವುದು ಇನ್ನೊಂದೇ ಕತೆ. ಅದು ಬಿಡಿ. ತುಂಬು ಚಂದಿರನ ಬೆಳಕಲ್ಲಿ ಮಡದಿಗೆ ಹೆರಿಗೆ ಸರಾಗ ಆಗಲಿ ಎಂದು ದೇವರ ನೆನೆಯುತ್ತ ಕುಳಿತ ಅವರಿಗೆ ಗಂಡು ಮಗು ಆದದ್ದು ಬಹಳ ಸಂತೋಷ ತಂದಿತ್ತು. ಆಚೀಚೆ ಮನೆಯ ಮಣಮಣಿಯರ ಸಹಾಯದಿಂದ, ತನ್ನ ಮಣಿಗೆ ಆ ಚಂದ್ರನ ನೆರಳಲ್ಲಿ ಜನಿಸಿದ ಈ ಚಂದ್ರನಿಗೆ ಶಶಾಂಕ ಎಂದು ನಾಮಕರಣ ಮಹೋತ್ಸವವ ಮನೆಯಲ್ಲಿಯೇ ಜರುಗಿಸಿ, ಹನ್ನೊಂದನೆಯ ದಿನಕ್ಕೆ ಮಣಿಯರೆಲ್ಲರಿಗೂ ಅಗ್ಗದ ಸೀರೆಯ ದಾನದಿಂದ ಧನ್ಯವಾದವ ಸಲ್ಲಿಸಿ ಜಗಲಿಯ ಮೇಲೆ ಬೆನ್ನು ಚಲ್ಲಿ ಮುಸ್ಸಂಜೆಯ ಕಳೆಯುತ್ತಿರಲು ಪುಟ್ಟ ಶಶಾಂಕ ಬಿಡದೇ ಅಳುತ್ತಿರುವುದು ಕೇಳಿ ಏನಾಯಿತೋ ಎಂದುಕೊಂಡು ತೊಟ್ಟಿಲ ಬಳಿ ಹೋದರೆ ಸರಸು ಅಲ್ಲಿಲ್ಲ.ಇದೊಂದು ಮರುಳಿ, ಮಗು ಅಳುವುದೂ ಕೇಳುವುದಿಲ್ಲ. ಉಚ್ಚೆ ಹೊಯ್ದೇ ಮುಗಿಯುವುದಿಲ್ಲ. ಎಲ್ಲಿ ಹೋದ್ಯೇ? ಎಂದು ತೊಟ್ಟಿಲ ತೂಗುತ್ತ ಕೂರಲು ಹೋದರೆ ಅಲ್ಲೊಂದು ಪಾಟಿ ಇವರ ಕುಂಡೆಯಡಿಗಾಗಿ ಫಟ್ ಎ0ದು ಒಡೆಯಿತು. ಹರಹರಾ, ಇದೆಂಥದಿದು ಒಡೆದದ್ದು!? ಎಂದು ದೀಪದ ಬೆಳಕಲ್ಲಿ ಹಿಡಿದು ನೋಡಿದರೆ ಸರಸ್ವತಿಯ ಅಕ್ಷರ.... ಬರುವುದಿಲ್ಲ. ಹೋಗುವೆ ಎಂದು. ಅದನ್ನು ಕಂಡು ದಂಗೇ ದಂಗು. ನಾನು ಮದುವೆಯಾದಾಗ 'ಅ' ಬರೆಯಲಿಕ್ಕೆ ಬರದಿದ್ದವಳು ಇಂದು ಪಾಟಿ-ಕಡ್ಡಿ ಹಿಡಿದು 'ಹೋ' ತನಕ ಬರೆದಿದ್ದಾಳಲ್ಲ! ಭಪ್ಪರೇ..... ಎಂದು ನಗಬೇಕೋ ಅಳಬೇಕೋ ತಿಳಿಯದೇ ತೊಟ್ಟಿಲ ತೂಗುವುದರಲ್ಲಿ ಮಗ್ನವಾದರು.ಅದೊಂದು ದೃಶ್ಯ ಸತ್ತರೂ ಮರೆಯಾಗದು ಮನಸಿನಿಂದ. ಹೇಳದೇ ಕೇಳದೇ ಬಿಟ್ಟು ಹೊರಡುವಾಗ ಕೇವಲ ಹನ್ನೊಂದು ದಿನದ ಮಗುವೂ, ಆ ಮಗುವಿನ ಜನನಕ್ಕೆ ಕಾರಣನಾದ ನಾನೂ ಅಂಥವಳಿಗೇ ನೆನಪಿಗೆ ಬಾರದೇ ಹೋಗಿರುವಾಗ, ನಮ್ಮ ಸ್ನೇಹದ, ದಾಂಪತ್ಯದ, ಕಾಮದ ಮೋಹ ಆಗ ಅವಳನ್ನು ಸೆರೆಹಿಡಿಯಲು ವಿಫಲವಾದಾಗ ನನ್ನ ಈ ಮನೆಯ ಮೇಲಿನ ಮೋಹ ಸೆರೆ ಹಿಡಿದೀತೇ!? ಎಂದು ಹುಸಿ ಸಮಾಧಾನ ತಂದುಕೊಂಡು ಕಣ್ಮುಚ್ಚುವುದರೊಳಗೆ ಬೆಳಕಿನೊಂದಿಗೆ ಸ್ವಾಗತಿಸುತ್ತಿತ್ತು ಬೆಂಗಳೂರು.

 ಹಳೆಯ ದಾರಿಯ ಮರೆತೋ ಅಥವಾ ತೊರೆದೋ ಮುಂದಿನ ದಾರಿಯ ಹುಡುಕಿ ಬೆಂಗಳೂರಿನ ಅನವಶ್ಯಕ ಅವಸರದಲ್ಲಿ ಮಗ-ಸೊಸೆಯೊಂದಿಗೆ ಕಳೆದುಹೋದರು.


  

6 comments:

  1. ಚಂದದ ಬರಹ ವಿನಾಯಕ :) ಇಷ್ಟ ಆತು ನಿನ್ನ ಬರವಣಿಗೆ ಶೈಲಿ :)

    ReplyDelete
    Replies
    1. ಧನ್ಯವಾದಗಳು.....
      ..
      ಮತ್ತೊಮ್ಮೆ ಧನ್ಯವಾದ

      Delete
  2. Rashi cholo bareje.

    Shantamanige katlamane shantamani heli entakke kareta heli helidde ilyala maraya :)?

    eegina havyakara paristhiti hinge iddu

    ReplyDelete
    Replies
    1. ಹಾ ಇದು ಹಳೇ ಸ್ಟಾಕು! mostly 2007-08ರದ್ ಆಗಿರ

      Delete
  3. ಇದೂ ಚೆಂದಿದ್ದೋ.. ವಿಶಿ ಹೇಳ್ದಂಗೆ ಇಲ್ಲಿರ ಸುಬ್ರಾಯಜ್ಜನ ಕಥೆ ಸುಮಾರು ಜನ ಹಳ್ಳಿಬದಿ ಹವ್ಯಕರ ಮನೇಲಿ ಆಗ್ತಾ ಇದ್ದು :-( :-(

    ReplyDelete
  4. Vinayaka.. Nange subrayajjana dialogue hodyo style bhari ishta aatu..

    ReplyDelete