Friday, February 3, 2012

ನಾಳೆ ಮತ್ತೆ..!

[ಬೀದಿ ಎರಡು]

ದೀಪಾವಳಿಯ ಮರುದಿನ. ಸೂರ್ಯನ ಮುಖದಲ್ಲಿ ಅಳಿಯದ ನಿದ್ರೆ. ರಸ್ತೆಯಲ್ಲೆಲ್ಲಾ ಪಟಾಕಿಗಳ ಅವಶೇಷ. ವ್ಯಾಪಾರವಾಗದೇ ಹೋಗಿ ರಾತೋರಾತ್ರಿ ಕುಡಿದ ಮತ್ತಿನಲ್ಲಿ ಫುಟ್ಪಾತಿನ ಮೇಲೆಲ್ಲಾ ಚೆಲ್ಲಾಡಿ ಹೋದ ಗೊಂಡೆ ಹೂವುಗಳು. ಓ ಇಲ್ಲಿ, ಹತ್ತಾರು ಮುದುಕಿಯರು, ನಾಕಾರು ಗಂಡಸರ ನಡುವೆ ಕುಳಿತಿದ್ದವಳ ಮುಖ ನೋಡಿಯೇ ನಾಕು ಮಾರು ಹೂವು ಕೊಂಡೆನಲ್ಲ ಅವಳ ಬಳಿ! ಎಂದು ಕಪ್ಪು ಹೆಂಗಸರ ನಡುವೆ ಬಿಳಿಯ ಹುಡುಗಿಯ ನೆನೆದ ಹಾಲು ಕೊಳ್ಳಲು ಬಂದ ಮುದುಕ. `ಎರಡು ದಿನದ ದೀಪಾವಳಿಯ ರಜೆಯುಂಡಿದ್ದು ಸಾಕು, ಇಂದು ನೋಡು ಸುಡುಗಾಡು ರಶ್ಶು' ಎಂದು ಬೇಂಕಿಗೆ ಹೋಗಲು ತಯಾರಾದ 
ನಿತ್ರಾಣಿ! ಎಲ್ಲ ಕನಸೇ? ಊಹೂಂ. ಕನಸು ಎಂದರೂ ನನಸೇ ಆದರೂ ಹನ್ನೆರಡು ಗಂಟೆಗೆ ನಿಮಿಷ ಮೊದಲೂ ಏಳದ ಬೇವರ್ಸಿ  ಗುಜ್ಜುಗಳು ಗಬ್ಬು ನಾರುವ ಬಾಯಿ ಹೊತ್ತುಕೊಂಡು ಹಾಲು ಕೊಳ್ಳಲು ಬಂದರೆ ಹಾಲು ಮಾರುವ ಅಜ್ಜನಿಗೆ ಬಿರುಗಾಳಿಯ ಅನುಭವ. ಒಂದು ಪೆಕೆಟ್ಟು ಹಾಲಿಗೆ ಮೂರು ರುಪಾಯಿ ಕಮಿಷನ್ನು ಬರುವಾಗ ಕತ್ತೆಯುಚ್ಚಿಯೂ ಗೋಮೂತ್ರವಾಗುತ್ತದೆ.

ದುಡ್ಡು ಬೇಕೇ ದುಡ್ಡು?!

ಅರುವತ್ತೆಂಟು ವರ್ಷದ ಈ retired ಮುದುಕನಿಗೆ re tired ಮಾಡುವ ಕೆಲಸ ಈ ಸೊಸೆಯದ್ದು ಎಂದು ಮುಸ್ಸಂಜೆ ದೇವಸ್ಥಾನದ ಮೆಟ್ಟಿಲ ಮೇಲೆ ಯೋಚನೆಗೆ ಬಿದ್ದ ಮುದುಕ. ತೊಡೆಯ ಮೇಲೆ ಮಗುವನ್ನು ಮಲಗಿಸಿಕೊಂಡು ಆರಿಂಚು ಉದ್ದದ ದಬ್ಬಣದಲ್ಲಿ ಗೊಂಡೆ ಹೂವಿನ ಕುಂಡೆಯನ್ನು ಚುಚ್ಚಿ ಮಾಲೆ ಮಾಡಿ ಮಾರುತ್ತಿದ್ದ ಬಿಳಿಯ ಹೆಂಗಸು ಎಲ್ಲಿ ಹೋದಳು! ಅವಳ ಹೂವೆಲ್ಲ ಕಾಲಿಯಾಯಿತೇ? ಭೋರ್ಮಳೆಯಂತೇ ಜೋರು ನಿದ್ರೆಯಲ್ಲಿದ್ದ ಆ ಮಗುವಿನ ಕನಸೆಲ್ಲವೂ ಕಾಲಿಯಾಯಿತೇ? ನಡುನಡುವೆ ಕೊಚ್ಚೆ ಮೂಸಲು ಬರುವ ಹಡಬೆ ಕುನ್ನಿಯ ಓಡಿಸುವಂತೇ ಅವಳಿಗೆ ಬಯ್ಯುತ್ತಿದ್ದ ಆ ಗಂಡನದ್ದೇ ಮಗುವೇನು ಅದು?  ಆಗಬಾರದೆಂದೇ? ಎಲ್ಲರಿಗೂ ಹಕ್ಕಿದೆ! ನಾಕು ಮಾರು ಗೊಂಡೆ ಹೂವು ಕಟ್ಟಿಕೊಟ್ಟ ಅವಳ ಕೈ ರಾತ್ರಿ ಪಟಾಕಿ ಹೊಡೆಯುವಾಗ ಸುಟ್ಟುಕೊಂಡ ಪಕ್ಕದ ಮನೆ ಹುಡುಗನ ಕೈಯ ಹಾಗೆ ಇದೆಯಲ್ಲ! ಸಣ್ಣ ಹೋಲಿಕೆ. ನಗು ಬಂತು.

ಮದುವೆಯಾಗದೇ ಸೂರತ್ತಿಗೆ ಬಂದು, ಸಣಕಲು ನಾಯಿಯಂತಹ ಹುಡುಗಿಯನ್ನು ವರಿಸಿ ದಸರೆಯ ಆನೆಗಾಗುವಷ್ಟು ಖರ್ಚು ಮಾಡಿದ್ದು ಬಹುಷಃ ನಾನು ಮಾತ್ರವೇ ಇರಬಹುದು ಎಂದು ತನ್ನ ಕೂಪವನ್ನೋಮ್ಮೆ ನೆನೆದ ಮಂಡೂಕ. ಎಷ್ಟಂದರೂ ಭೂತ ಭೂತವೇ!!

ಒಂದು ಕೈಯಲ್ಲಿ ನೆಲಕ್ಕೆ ಅಲೆಯುವ ಸೀರೆ, ಇನ್ನೊಂದು ಕೈಯಲ್ಲಿ ವೆನಿಟಿ ಬೇಗನ್ನು ಹಿಡಿದುಕೊಂಡು ತಾಪಿ ನದಿಯ ದಡದ ಸ್ವಾಮಿ ನಾರಾಯಣ ಮಂದಿರಕ್ಕೆ ಪ್ರದಕ್ಷಿಣೆ ಹಾಕುವ ಸುಮಂಗಲೆಯರು, ಪ್ರದಕ್ಷಿಣೆ ಎಷ್ಟಾಯಿತೆಂದು ಕೈಬೆರಳ ಗಂಟಲ್ಲೆ ಲೆಕ್ಕ ಹಿಡಿಯುತ್ತಿರುವ ಸುಮಂಗಲೆಯರ ಗಂಡಂದಿರು, ನಿಧಾನ ನಿಧಾನ ನಡೆದು ಸುಸ್ತಾಗಿ ಕುಳಿತ ಅಜ್ಜಿಯರು, ಶಾಂತತೆಯನ್ನು ಕಾಪಾಡುತ್ತ ಕುಳಿತ ಹುಡುಗರನ್ನು ವಾರೆಗಣ್ಣಿಂದ ನೋಡಿ ಜೋಕು ಹೊಡೆದು ತಮ್ಮೊಳಗೇ ನಗುತ್ತ ಹೋಗುವ ಹೆಣ್ಮಕ್ಕಳು ಇವರನ್ನೆಲ್ಲ ನೋಡುತ್ತ ಕುಳಿತರೆ ಮತ್ತೊಮ್ಮೆ ಹುಟ್ಟಿ ಬರಬೇಕು ಸತ್ತುಹೋಗಿ ಎನಿಸುತ್ತದೆ ಮನಕ್ಕೆ. ಈ ಯವ್ವನದಲ್ಲಿ ಪಡೆಯಲಾಗದ್ದನ್ನು ಮುಂದಿನ ಯವ್ವನದಲ್ಲಿ ಪಡೆದು ಅದರ ಸದುಪಯೋಗ ಪಡೆದುಕೊಳ್ಳಬೇಕು, ಶಹಬ್ಬಾಸ್ ಗಂಡಸೇ ಎನಿಸಿಕೊಳ್ಳಬೇಕು. ಎಂದಾಗಬಹುದು ಈ ಜನ್ಮದ ಕೊನೆಯ ದಿನ! ಈ ಬೀದಿ ಸಾಕು ನನಗೆ. ಮುಂದಿನ ಬೀದಿಯ ಡೊಂಬರಾಟ ಬೇಡವೇ ಬೇಡ. ಗುಜರಾತಿಯ ದುರಹಂಕಾರ ಸಾಕೇ ಸಾಕು. ನಾರಾಯಣಾ, ಭರಪೂರ ಹಾಲು ತುಪ್ಪ ಹೋಳಿಗೆ ಸಿಗುವಲ್ಲಿ  ಹುಟ್ಟಿಸು ನನ್ನ. ಬೃಂದಾವನದಲ್ಲಿ ಕೆಂಪು ಕೆನ್ನೆಯ ಮಾಗಿದ ಮಾವಿನ ಹಣ್ಣಿನ ತೋಟದಲ್ಲಿ...................... 

1 comment:

  1. ಸೂಪರ್.. ಯಾವುದು ಅಂತ ಹೇಳ್ಲಿ.. ಎಲ್ಲಾ ಸೂಪರು :-) ಶೈಲಿ , ಓಘ ಭಾರಿ ಇಷ್ಟ ಆತು.
    ಕಾಲಿ=ಖಾಲಿ ಅಲ್ದಾ ಅನುಸ್ತು :-)

    ReplyDelete